ಛಬ್ಬಿ ಹಾದಿ ಸುಗಮಗೊಳಿಸಿದ ಜೋಶಿ
ಹುಬ್ಬಳ್ಳಿ: ಕಾಂಗ್ರೆಸ್ನಿಂದ ಬಂದು ಕಮಲ ಬಾವುಟ ಹಿಡಿದ ಮೂರೇ ದಿನದಲ್ಲಿ ಕಲಘಟಗಿ ಕ್ಷೇತ್ರದ ಟಿಕೆಟ್ ಪಡೆದ ನಾಗರಾಜ ಛಬ್ಬಿಯವರ ವಿರುದ್ಧವೇ ಬಂಡಾಯವೇಳಲು ಮುಂದಾಗಿದ್ದ ಸ್ವಪಕ್ಷೀಯ ಡಜನ್ಗೂ ಹೆಚ್ಚು ಆಕಾಂಕ್ಷಿಗಳ ಬಂಡಾಯವನ್ನು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಒಂದೇ ಸಭೆಯಲ್ಲಿ ಥಂಡಾಯಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶತಾಯಗತಾಯವಾಗಿ ಈ ಭಾರೀ ಕಲಘಟಗಿ ಟಿಕೆಟ್ ಸ್ಥಳೀಯರಿಗೆ ನೀಡಬೇಕು ಎಂದು ಕಳೆದ ಹಲವು ತಿಂಗಳಿಂದ ಹೋರಾಟ ಮಾಡಿಕೊಂಡ ಬಂದ ಸ್ಥಳೀಯ 12 ಜನ ಆಕಾಂಕ್ಷಿಗಳು ಮತಕ್ಷೇತ್ರದ-75 ರ ಟಿಕೆಟ್ ನಾಗರಾಜ್ ಛಬ್ಬಿಗೆ ನೀಡಿದ್ದರಿಂದ ಅಸಮಾಧಾನ ವ್ಯಕ್ತಪಡಿಸಿ ಬಂಡಾಯ ಅಭ್ಯರ್ಥಿಯಾಗಿ ನಿಲ್ಲುವ ಸೂಚನೆಯನ್ನು ಬಿಜೆಪಿ ವರಿಷ್ಠರಿಗೆ ಮುಟ್ಟಿಸಿದ್ದರು.ಇದನ್ನು ತಿಳಿದ ಜೋಶಿ ನಿನ್ನೆ ತಮ್ಮ ನಿವಾಸದಲ್ಲೇ ಎಲ್ಲ ಆಕಾಂಕ್ಷಿಗಳನ್ನು ಕರೆದು ಮುಖಾಮುಖಿ ಸಭೆಯಲ್ಲಿ ಅತೃಪ್ತಿ,ಅಸಮಾಧಾನಗಳಿಗೆ ಕೊನೆ ಹಾಡಿ ಪಕ್ಷದ ಅಭ್ಯರ್ಥಿ ಗೆಲ್ಲಿಸುವ ಶಪಥ ಮಾಡಿಸಿದರು.
ಕೆಲವು ಆಕಾಂಕ್ಷಿಗಳು ಕೇಂದ್ರ ಬಿಜೆಪಿಯಲ್ಲಿ ಕಳೆದ 20-30 ವರ್ಷಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೆವೆ. ಕಳೆದ ಆರು ತಿಂಗಳಿಂದ 12 ಜನ ಆಕಾಂಕ್ಷಿಗಳು ಎಲ್ಲ ಗ್ರಾಮಗಳಿಗೆ ತೆರಳಿ ಪಕ್ಷ ಅಧಿಕಾರಕ್ಕೆ ತರುವ ಉದ್ದೇಶದಿಂದ ಎಲ್ಲ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿದ್ದೇವೆ.ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.
ಆಭಿಪ್ರಾಯಗಳನ್ನು ಆಲಿಸಿ ಕೇಂದ್ರ ಸಚಿವರಾದ ಪ್ರಹ್ಹಾದ ಜೋಶಿ ಮಾತನಾಡಿ, ಕಲಘಟಗಿ ಎಲ್ಲ ನಮ್ಮ ಕಾರ್ಯಕರ್ತರ ಹಿತ ಕಾಪಾಡುವುದು ನನ್ನ ಜವಾಬ್ದಾರಿ ಸ್ಥಳೀಯ ಚುನಾವಣೆ, ತಾಲೂಕು,ಜಿಲ್ಲಾ ಪಂಚಾಯತಿ ಟಿಕೆಟ್ ಸೇರಿದಂತೆ ನಿಮ್ಮ ಜತೆ ಚರ್ಚೆಮಾಡಿಯೇ ನಿರ್ಧಾರ ತೆಗೆದುಕೊಳ್ಳುತ್ತೇನೆ. ಯಾರು ಕೂಡ ಪಕ್ಷವನ್ನು ಬಿಟ್ಟು ಹೋಗದೆ ಬಿಜೆಪಿ ಗೆಲುವಿಗೆ ಶ್ರಮಿಸಿ ಎಂದು ಬಂಡಾಯ ಶಮನಗೊಳಿಸಿದರು. ನಾಗರಾಜ್ ಛಬ್ಭಿ ಮಾತನಾಡಿ ನಾನು ಶಾಸಕನಾದರೇ ನೀವೆಲ್ಲರೂ ಶಾಸಕರಾದಂತೆ ಎಲ್ಲರೂ ಸೇರಿ ಚುನಾವಣೆ ಎದುರಿಸೋಣ ಎಂದರು.
ಈ ಸಂದರ್ಭದಲ್ಲಿ ಉಸ್ತುವಾರಿ ಗುಜರಾತ ಶಾಸಕ ಉದಯ, ಚುನಾವಣೆ ಪ್ರಭಾರಿ ಈರಣ್ಣ ಜಡಿ, ಆಕಾಂಕ್ಷಿಗಳಾದ ವಿ.ಎಸ್ ಪಾಟೀಲ್, ಡಾ. ಕಲ್ಮೇಶ್ ಹಾವೇರಿಪೇಟ್, ಶಂಕರ ಬಸವರಡ್ಡಿ, ಮಹೇಶ್ ತಿಪ್ಪಣ್ಣವರ, ಬಸವರಾಜ ಕರಡಿಕೋಪ್ಪ, ಸಹಿತ ಎಲ್ಲರೂ ಇದ್ದರು. ಆದರೆ ಹಾಲಿ ಶಾಸಕ ಸಿ.ಎಂ.ನಿಂಬಣ್ಣವರ ಅನುಪಸ್ಥಿತಿ ಎದ್ದುಕಂಡಿತು.