ಹುಬ್ಬಳ್ಳಿ-ಧಾರವಾಡ ಸುದ್ದಿ
ಕಾಯಕಯೋಗಿ ಸಿದ್ಧರಾಮೇಶ್ವರರು

ಕಾಯಕಯೋಗಿ ಸಿದ್ಧರಾಮೇಶ್ವರರು

(ನಾಳೆ ಸಿದ್ಧರಾಮೇಶ್ವರ ಜಯಂತಿ ಪ್ರಯುಕ್ತ ಶರಣರ ಕುರಿತ ಕಿರು ಲೇಖನ)
ಹನ್ನೆರಡನೆಯ ಶತಮಾನದ ಬಸವಾದಿ ಶರಣರಲ್ಲಿ ಶ್ರೀ ಸಿದ್ಧರಾಮೇಶ್ವರರು ಲೌಕಿಕವಾಗಿ ಜನೋಪಯೋಗಿ ಕಾರ್‍ಯಗಳಲ್ಲಿ ತೊಡಗಿಸಿಕೊಂಡಿದ್ದರು. ಅಂತರಂಗದಲ್ಲಿ ಅವರೊಬ್ಬ ಯೋಗಿಯೇ ಆಗಿದ್ದರು.
ದೈವ ಸಂಕಲ್ಪ ಹಾಗೂ ರೇಣವಸಿದ್ದೇಶ್ವರ ನುಡಿಯಂತೆ ಕಲಿಯುಗದ ಅಜ್ಞಾನವನ್ನು ಹೋಗಲಾಡಿಸಲು ಸೊನ್ನಲಿಗೆಯ (ಇಂದಿಗೆ ಸೋಲಾಪೂರ) ಮರಡಿಯ ಮುದ್ದುಗೌಡ ಹಾಗೂ ಸುಗ್ಗಲಾದೇವಿಯ ಮಗನಾಗಿ ಜನ್ಮ ತೆಳೆದ ಚಾರಿತ್ರಿಕ ಹಾಗೂ ಕಾರ್ದಿಕ ಪುರುಷ ಮತ್ತು ಸೊನ್ನಲಿಗೆಯನ್ನು ಅಭಿನವ ಶ್ರೀಶೈಲವಾಗಿಸಿದ ಕಾಯಕಯೋಗಿ.
ಶ್ರೀಶೈಲದ ಮಲ್ಲಯ್ಯನವರ ಆಜ್ಞೆಯಂತೆ ಸೊನ್ನಲಿಗೆಯ ಕಪಿಲಸಿದ್ಧ ಮಲ್ಲಿಕಾರ್ಜುನ ದೇವಾಲಯದಲ್ಲಿ ನೆಲೆಸಿ ಸ್ಥಾವರ ಲಿಂಗಗಳನ್ನು, ಕೆರೆಕಟ್ಟೆಗಳನ್ನು ಭಕ್ತರಿಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿ ಲೋಕದ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದಂತಹ ಕರ್ಮಯೋಗಿ.
ಅಂದು ಅವರ ಎಲ್ಲ ಸತ್ಕಾರಗಳೀಗೆ ರಾಗ ಚಾಮಲಾದೇವಿ ಆರ್ಥಿಕವಾಗಿ ಸಹಾಯ ಮಾಡಿದರೆ, ಸಹಸ್ರಾರು ಶ್ರಮಜೀವಿ ವಡ್ಡರ ಜನಾಂಗ (ವಡ್ಡರಭೋವಿ) ಅವರಿಗೆ ದೈಹಿಕವಾಗಿ ನೆರವಾಗಿದ್ದರು ಎಂಬುದು ಚಾರಿತ್ರಿಕ ಸತ್ಯ. ಇಂದಿಗೂ ವಡ್ಡರ ಬೋವಿ ಜನಾಂಗ ಸಿದ್ಧರಾಮರನ್ನು ತಮ್ಮ ಕುಲಗುರುವೆಂದು ಪೂಜಿಸುತ್ತಾ ಪ್ರತಿ ವರ್ಷ ಜನೇವರಿ ೧೪ ರಂದು ನಾಡಿನಾದ್ಯಂತ ಸಿದ್ಧರಾಮೇಶ್ವರ ಜಯಂತಿಯನ್ನು ಆಚರಿಸುತ್ತಾರೆ.
ಸೊನ್ನಲಿಗೆಗೆ ಬಂದ ಅಲ್ಲಮ ಪ್ರಭುಗಳು ಸಿದ್ಧರಾಮರನ್ನುದ್ದೇಶಿಸಿ ವಡ್ಡರಾಮ ದೇಹವ ದೇವಾಲಯವಾಗಿರುವಾಗ ಕಲ್ಲಿನ ಕಟ್ಟಡದಲ್ಲಿ ದೇವರು ಹೇಗೆ ಇದ್ದಾನು?
ತನುವೆಂಬ ಏರಿಗೆ ಮನವೆಂಬ ಕಟ್ಟೆ ಆಚಾರವೆಂಬ ಸೋಪಾನ,
ಪರಮಾನಂದವೆಂಬ ಜಲವ ತುಂಬಿ ಕೆರೆಯ ಕಟ್ಟಿ ಬಲ್ಲವನಾರನೂ ಕಾಗ, ನಾ ಕೆಟ್ಟಿದ ಕೆರೆ ಸ್ಥಿರವಾಯಿತ್ತು ಗುಹೇಶ್ವರ
ನಿಮ್ಮಾಗ ಎಂದೆನ್ನಲು
ಸಿದ್ಧರಾಮರು
ಕಟದ ಕಲ್ಲು ಲಿಂಗವೆನಿಸಿತ್ತು, ಕಟೆಯದ ಕಲ್ಲು ಕಲ್ಲೆನಿಸಿತ್ತು ಪೂಜಿಸಿದ ಮಾನವ ಭಕ್ತನೆನಿಸದನು
ಪೂಜಿಸಿದ ಮಾನವ ಮಾನವನೆನಿಸಿದನು
ಕಲ್ಲಾದೊಡೇನು ಪೂಜಿಗೆ ಫಲವಾಯಿತು
ಕೃಷಿಯ ಮಾಡಿ ಉಣ್ಣದೆ ಹಸಿವು ಹರಿವ ಪರಿ ಇನ್ನೆಂತೂ
ಕರ್ಮಯೋಗವ ಮಾಡದ ನಿರ್ಮಲ ಸುಚಿತ್ತವನರಿವ ಪರಿ ಇನ್ನಂತೋ ಎನ್ನಲು
ಅಲ್ಲಮರು
ಕರ್ಮಯೋಗವೊಂದೇ ಸಾಲದು ನೀನು ಮಾಡಬೇಕಾಗಿರುವ ಅಧ್ಯಾತ್ಮಿಕ ಪ್ರಗತಿಯನ್ನು ವೈಚಾರಿಕ ಮಂಥನವನ್ನು ಕಲ್ಯಾಣದಲ್ಲಿ ನೋಡಿವಿಯಂತೆ ಬಾ ಎಂದು ಕರೆದುಕೊಂಡು ಹೋಗುತ್ತಾರೆ.
ಕಲ್ಯಾಣದಲ್ಲಿ ವರ್ಗ , ವರ್ಣ ಜಾತಿ ಲಿಂಗ ಭೇದವಿಲ್ಲದ ಕಾಯಕ, ಹಾಗೂ ಗುರು, ಲಿಂಗ ಜಂಗಮ ತತ್ವವನ್ನಳವಹಿಸಿಕೊಂಡಿರುವ ತೀರ ಸಾಮಾನ್ಯ ಹಾಗೂ ದುಡಿಯುವ ವರ್ಗದ ವಿವಿಧ ಸಮುದಾಯದ ಶರಣ ಶರಣೆಯರ ಆಳವಾದ ಜ್ಞಾನವನ್ನು ವಾಸ್ತವ ನೆಲೆಯಲ್ಲಿ ಅವರು ರಚಿಸಿರುವ ವಚನಗಳನ್ನೋದಿದ ಸಿದ್ಧರಾಮರು, ಪ್ರಭಾವಿತರಾಗಿ, ಚನ್ನಬಸವಣ್ಣರಿಂದ ಲಿಂಗ ದೀಕ್ಷೆಯನ್ನು ಪಡೆಯುತ್ತಾರೆ. ಹಾಗೂ ಶೂನ್ಯ ಪೀಠದ ಮೂರನೆಯ ಅಧ್ಯಕ್ಷರಾಗಿ ಲೋಕದಲ್ಲಿ ವೈಚಾರಿಕ ಜಾಗೃತಿಯನ್ನುಂಟು ಮಾಡಲು ಕಪಿಲಸಿದ್ಧ ಮಲ್ಲಿಕಾರ್ಜುನ ಮತ್ತು ಯೋಗಿನಾಥನೆಂಬ ಅಂಕಿತನಾಮದಲ್ಲಿ ಸಹಸ್ರಾರು ವಚನಗಳನ್ನು ರಚಿಸುತ್ತಾರೆ. ಅರವತ್ತೆಂಟು ಸಾವಿರ ವಚನಗಳನ್ನು ಹಾಡಿ ಹಾಡಿ ಸೋತಿತ್ತೆನ್ನ ಮನ ಎಂದು ಅವರು ತಮ್ಮ ವಚನವೊಂದರಲ್ಲಿ ಉಲ್ಲೇಖಿಸಿದ್ದಾರೆ. ಈಗ ಲಭ್ಯವಿರುವ ವಚನಗಳ ಸಂಖ್ಯೆ: ೧೫೦೦ ಕ್ಕೂ ಮಿಗಿಲಾಗಿದೆ ಅವರ ಕೆಲವು ವಚನಗಳು
ಒಬ್ಬರ ಮನವ ನೋಯಿಸಿ
ಒಬ್ಬರ ಮನವ ಘಾತವ ಮಾಡಿ
ಗಂಗೆಯ ಮುಳುಗಿದಡೇನಾಗುವುದಯ್ಯ
ಚಂದ್ರನು ಗಂಗೆಯ ತಡಿಯಲ್ಲಿದ್ದಡೇನು
ಕಲಂಕ ಬಡದಾಯಿತ್ತಯ್ಯ
ಅದು ಕಾರಣ, ಮನವ ನೋಯಿಸದವನ
ಒಬ್ಬರ ಘಾತವ ಮಾಡದವನ ಪರಮ ಪಾವನ
ನೋಡಾ ಕಪಿಲಸಿದ್ಧ ಮಲ್ಲಿಕಾರ್ಜುನ
ತಾ ಮಾಡಿದ ಹೆಣ್ಣು ತನ್ನ ತೆಲೆಯನ್ನೇರಿತ್ತು
ತಾ ಮಾಡಿದ ಹೆಣ್ಣು ತನ್ನ ತೊಡೆಯನ್ನೇರಿತ್ತು
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನ್ನೇರಿತು
ತಾ ಮಾಡಿದ ಹೆಣ್ಣು ನಾರಾಯಣ ಎದೆಯನೇರಿತ್ತು
ಅದಕಾರಣ ಹೆಣ್ಣು ಹೆಣ್ಣಲ್ಲ ಹೆಣ್ಣು ರಾಕ್ಷಸಿಯಲ್ಲ, ಹೆಣ್ಣು ಪ್ರತ್ಯಕ್ಷ ಕಪಿಲ ಸಿದ್ಧ ಮಲ್ಲಿಕಾರ್ಜುನ ನೋಡಾ, ಎಂದು ಹೆಣ್ಣನ್ನು ಸಾಕ್ಷಾತ್ ದೇವಿ ಸ್ವರೂಪ ಎಂದು ಬರೆಯುತ್ತಾರೆ.
ವ್ಯಾಕರಣವನೋದಿದಲ್ಲಿ ಶಬ್ದ ಶುದ್ದಿಯಲ್ಲಿದೆ
ಮನ:ಶುದ್ಧಿಯಾಗಿ ಜ್ಞಾನ ಶುದ್ಧಿಯಾಗದು
ಕುಲ ಕುಲವೆಂದು ಹೋರಾಡುವ ಅಣ್ಣಗಳಿರಾ ಕೇಳಿರೋ ಕುಲವೇ ಡೋಹರನ? ಕುಲವೇ
ಮಾದರನ ? ಕುಲವೇ ದುರ್ವಾಸನೆ?
ಕುಲವೇ ವ್ಯಾಸನ ? ಕುಲವೇ ವಾಲ್ಮೀಕನ
ಕುಲವೇ ಕೌಂಡಿಲ್ಯನ?
ಕುಲವೇ ನೋಳ್ಬಡೇ ಹುರುಳಿಲ್ಲ, ಅವರ ನಡನೋಳ್ಬಹೆ
ನಡೆಯುವವರು ತ್ರಿಲೋಕಲ್ಲಲ್ಲಿ ನೋಡಾ ಕಪಿಲ ಸಿದ್ಧ ಮಲ್ಲಿಕಾರ್ಜುನ’
ಪ್ರಥಮಂತು ಬಸವಣ್ಣ, ದ್ವಿತಿಯಂತು ಲಿಂಗವು
ತೃತಿಯಂತು ತತ್ವ ಬ್ರಹ್ಮಾಂಡದಲ್ಲಿ ಆಕಳಂಕ ಗುಣ ನಿಧಿ ಚಿದಾನಂತ ಬಸವಂಗೆ ಬಕುತನಾದೆನು ಗುರುವೆ ಯೋಗಿನಾಥ”. ಐಹಿಕ ಬದುಕಿನಲ್ಲಿ ದಯವೇ ಮೂಲವಾಗಿಸಿಕೊಂಡು, ಕಾಯಕ ಸಿದ್ದಾಂತದೊಂದಿಗೆ ಮೃತ್ಯು ಲೋಕದಲ್ಲಿ ಪಾಪಪ್ರಜ್ಞೆಯಿಂದ ಬದುಕುದ ವಾಸ್ತವಗಳೊಂದಿಗೆ ಬದುಕಬೇಕೆಂದು ಸಾರುತ್ತಾರೆ. ಸಿದ್ಧರಾಮರ ವ್ಯಕ್ತಿತ್ವವನ್ನು ರೂಪಿಸಿದವರು. ಮೂರು ಮಹಾನ ಶರಣರೆನ್ನಬಹುದು ಒಬ್ಬರು ಶ್ರೀಶೈಲದ ಮಲ್ಲಯ್ಯನವರು ಎರಡು ರೇವಣಸಿದ್ಧರು ಹಾಗೂ ಅಲ್ಲಮ ಪ್ರಭುಗಳು.ಜೀವಿತದುದ್ದಕೂ ಲೋಕಹಿತಕ್ಕಾಗಿ ಜೀವಿಸಿದ ಸಿದ್ಧರಾಮರು ಕೊನೆಗೆ ಸೊನ್ನಲಿಗೆಯಲ್ಲಿ ಸಮಾಧಿಯಲ್ಲಿ ಲೀನವಾಗುತ್ತಾರೆ. ಅವರ ಜನಮುಖಿ ವಚನಗಳು ಇಂದಿಗೂ ಅತ್ಯಂತ ಪ್ರಸ್ತುತವಾಗಿವೆ.

 

ಲೇಖಕರು
ಲಕ್ಷ್ಮಣ ಬೀಳಗಿ,ವಕೀಲರು ಹುಬ್ಬಳ್ಳಿ

administrator

Related Articles

Leave a Reply

Your email address will not be published. Required fields are marked *