ಧಾರವಾಡ: ಬಿಜೆಪಿಗೆ ಹಿಂದೂ-ಮುಸ್ಲಿಂ ಯಾರೂ ಬೇಕಾಗಿಲ್ಲ. ಅವರಿಗೆ ಅಧಿಕಾರ ಮಾತ್ರ ಬೇಕು. ಹಿಂದೂ ಮೇಲೂ ಅವರಿಗೆ ಪ್ರೀತಿ ಇಲ್ಲ, ಮುಸ್ಲಿಂರ ಮೇಲೂ ಪ್ರೀತಿ ಇಲ್ಲ. ಈ ದೇಶಕ್ಕೆ ಬಿಜೆಪಿ, ಆರ್ಎಸ್ಎಸ್ ಸ್ವಾತಂತ್ರ್ಯ ತಂದು ಕೊಟ್ಟಿದೆಯಾ, 63 ಸಾವಿರ ಜನ ಮುಸ್ಲಿಂರು ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದ್ದಾರೆ ಎಂದು ಮಾಜಿ ಸಚಿವ ಬಿ.ಝಡ್. ಜಮೀರ್ ಅಹ್ಮದ್ ಖಾನ್ ಹೇಳಿದರು.
ಇಲ್ಲಿನ ಎಎಫ್ಎಸ್ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಮುಸ್ಲಿಂ ಸಮಾವೇಶದಲ್ಲಿ ಅವರು ಮಾತನಾಡಿದರು.
ಇದು ಕಾಂಗ್ರೆಸ್ ಕಾರ್ಯಕ್ರಮ ಅಲ್ಲ, ಧಾರವಾಡ ಅಂಜುಮನ್ ಸಂಸ್ಥೆಯ ಹಿರಿಯರ ಸಭೆ. ಅವರು ಒಂದು ಮನವಿ ನೀಡಿದ್ದಾರೆ, ಅದನ್ನು ಕೆಪಿಸಿಸಿ, ಎಐಸಿಸಿಗೆ ತಲುಪಿಸುವೆ ಎಂದರು.
ನಮ್ಮ ರಾಜ್ಯದಲ್ಲಿ ಮಾತ್ರ ಪರಸ್ಪರ ಜಾತಿ, ಪ್ರೀತಿಯಿಂದ ಇದ್ದೇವೆ. ಆದರೆ ಇತ್ತೀಚಿನ ಬೆಳವಣಿಗೆ ತುಂಬಾ ನೋವು ತಂದಿದೆ. ಸರಕಾರ ಮೊದಲ ಸಲ ವಿವಾದ ಆದಾಗಲೇ ಏನಾದರೂ ಮಾಡಬೇಕಿತ್ತು. ಹಿಜಾಬ್ ಅನ್ನು ನೂರಾರು ವರ್ಷಗಳಿಂದ ಧರಿಸಲಾಗುತ್ತಿದೆ. ಸ್ವಾತಂತ್ರ್ಯ ಬರುವ ಮೊದಲೇ ಹಿಜಾಬ್ ಹಾಕುತ್ತಿದ್ದಾರೆ. ಬಿಜೆಪಿಯವರು ಸಣ್ಣ ಮಕ್ಕಳಿಗೆ ಕೇಸರಿ ಶಾಲು ಹಾಕಿ ಜಾತಿ ಬೀಜ ಹಾಕುತ್ತಿದ್ದಾರೆ ಎಂದು ದೂರಿದರು.
ಮುಖಂಡ ಇಸ್ಮಾಯಿಲ್ ತಮಟಗಾರ ಮಾತನಾಡಿ, ನಾನು ಮೂರು ಬಾರಿ ಎಂಎಲ್ಎ ಚುನಾವಣೆ ಸೋತಿದ್ದೇನೆ. ಚುನಾವಣೆ ಒಲ್ಲೆ ಎಂದಿದ್ದೆ, ಜನ ಸ್ಪರ್ಧಿಸಲು ಒತ್ತಾಯಿಸುತ್ತಿದ್ದಾರೆ. ಈ ಭಾಗದಲ್ಲಿ ಮುಸ್ಲಿಂಗೆ ಟಿಕೆಟ್ ಕೊಡಿ. ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಒಳ್ಳೆಯದಾಗುತ್ತೆ ಎಂದು ಬೆಂಬಲಿಗರು ಹೇಳುತ್ತಿದ್ದಾರೆ. ಮುಸ್ಲಿಂ ಮುಖಂಡರ ಬಗ್ಗೆ ಗಮನ ಹರಿಸಬೇಕೆಂದು ವಿನಂತಿಸಿದರು.
ಅಂಜುಮನ್ ಅಧ್ಯಕ್ಷ ಇಕ್ಬಾಲ್ ಜಮಾದಾರ, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮುಖಂಡರಾದ ಅಲ್ತಾಫ್ ಕಿತ್ತೂರ, ಅಷ್ಪಾಕ್ ಬೆಟಗೇರಿ, ಶಕೀಲ್ ತಮಟಗಾರ ಇನ್ನಿತರರಿದ್ದರು.