ಧಾರವಾಡ: ಟ್ರ್ಯಾಕ್ಟರ್ ಶೋ ರೂಂಗೆ ಆಕಸ್ಮಿಕ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾದ ಘಟನೆ ಇಲ್ಲಿನ ಸವದತ್ತಿ ರಸ್ತೆಯಲ್ಲಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಾಲೆಯ ಹತ್ತಿರ ನಿನ್ನೆ ಮಧ್ಯರಾತ್ರಿ ಸಂಭವಿಸಿದೆ.
ನವೀನ ಕಂಬಳಿ ಎನ್ನುವರ ನವೀನ ಎಂಟರ್ ಪ್ರೈಸಸ್ ಶೋ ರೂಂ ಬೆಂಕಿ ಅವಘಡಕ್ಕೆ ಸಿಲುಕಿದೆ. ಮಧ್ಯರಾತ್ರಿ 12.20ರ ಸುಮಾರಿಗೆ ಶೋರೂಂಲ್ಲಿ ಬೆಂಕಿ ಹತ್ತಿದ್ದು ಕಂಡು ಬಂದಿದೆ.
ಅಕ್ಕಪಕ್ಕದವರು ಶೋರೂಂ ಮಾಲಿಕರಿಗೆ ವಿಷಯ ತಿಳಿಸಿದ್ದಾರೆ. ನಂತರ ಅಗ್ನಿಶಾಮಕ ದಳ ಸಿಬ್ಬಂದಿ ಕರೆಸಿ ಬೆಂಕಿ ಆರಿಸಲು ಪ್ರಯತ್ನಿಸಲಾಗಿದೆ.
ಆದರೆ, ಬೆಂಕಿ ಹತೋಟಿಗೆ ತರುವಷ್ಟರಲ್ಲಿ ಶೋರೂಂನಲ್ಲಿ ಇಟ್ಟಿದ್ದ 2.14 ಲಕ್ಷ ರೂಪಾಯಿ ನಗದು ಮತ್ತು ಅಂದಾಜು 8.50 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಬೆಂಕಿಗಾಹುತಿ ಆಗಿವೆ. ಈ ಕುರಿತು ಶೋರೂಂ ಮಾಲಿಕ ನವೀನ ಕಂಬಳಿ ಉಪನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.