ಅಣ್ಣಿಗೇರಿ: ಪಟ್ಟಣದ ರಾಷ್ಟ್ರೀಯ ಹೆದ್ದಾರಿ 67ರಲ್ಲಿ ಸಮೀಪದ ಆರೇರ ಸೇತುವೆ ಮೇಲೆ ನಂಬರ್ ಇಲ್ಲದ ನೀಲಿ ಬಣ್ಣದ ಟಾಟಾ ಎ.ಸಿ ವಾಹನ ದಲ್ಲಿ ಬಂದು ಹುಬ್ಬಳ್ಳಿಯ ಐಸರ್ ವಾಹನ ಅಡ್ಡಗಟ್ಟಿ ಚಾಲಕ, ಸುಪರ್ ವೈಸರ್ ಮೇಲೆ ಖಾರದ ಪುಡಿ ಎರಚಿ, ಸುತ್ತಿಗೆಯಿಂದ ಹಲ್ಲೆ ನಡೆಸಿ 1.22 ಲಕ್ಷ ರೂ ನಗದು ಕಿತ್ತು ಪರಾರಿಯಾಗಿದ್ದ ನಾಲ್ವರನ್ನ ಬಂಧಿಸುವಲ್ಲಿ ಅಣ್ಣಿಗೇರಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋಮವಾರ ರಾತ್ರಿ 8-50ರ ಸುಮಾರಿಗೆ ಈ ಘಟನೆ ನಡೆದಿದ್ದು ಐಸರ್ ವಾಹನ ಸಂಖ್ಯೆ ಕೆಎ 63/8284 ಅಡ್ಡಗಟ್ಟಿದ ನಾಲ್ಕು ಜನರಿದ್ದ ತಂಡ ವಾಹನದಲ್ಲಿದ್ದ ಚಾಲಕನ ಹಾಗೂ ಸೂಪರ್ ವೈಸರ್ ಮುಖಕ್ಕೆ ಖಾರದ ಪುಡಿ ಮತ್ತು ಸಣ್ಣ ಸುತ್ತಿಗೆಯಿಂದ ಮೂಗು ಮುಖಕ್ಕೆ ಎಲ್ಲೆಂದರಲ್ಲಿ ಹೊಡೆದಿದೆಯಲ್ಲದೇ 1 ಲಕ್ಷದ 22 ಸಾವಿರ ರೂಗಳನ್ನು ಕಿತ್ತುಕೊಂಡು ಕಾಲ್ಕಿತ್ತಿತ್ತು.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ನಾಲ್ವರು ಆರೋಪಿಗಳನ್ನು ನವಲಗುಂದ ಠಾಣಾ ಸಿಪಿಐ ಸಿ.ಜಿ.ಮಠಪತಿ, ಅಣ್ಣಿಗೇರಿ ಪೊಲೀಸ್ ಠಾಣಾಧಿಕಾರಿ ಎಲ್.ಕೆ.ಜೂಲಕಟ್ಟಿ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ.
ಬ0ಧಿತರಲ್ಲಿ ನವಲಗುಂದ ತಾಲೂಕಿನ ನಾಲ್ವರು, ಲಕ್ಷ್ಮೇಶ್ವರ ಮೂಲದ ಇಬ್ಬರು ಹಾಗೂ ಕುಂದಗೋಳ ತಾಲೂಕಿನ ಒಬ್ಬರು ಇದ್ದಾರೆ ಎನ್ನಲಾಗಿದೆ.
ಇನ್ನೂ ಆರೇರ ಸೇತುವೆ ಮೇಲೆ ಹುಬ್ಬಳ್ಳಿಯ ಸಿದ್ಧಾರೂಢ ಸ್ವೀಟ್ ಮಾರ್ಟ್ ಕಂಪನಿ ವಾಹನ ಅಡ್ಡಗಟ್ಟಿ 1.22 ಲಕ್ಷ ನಗದನ್ನು ಕಳ್ಳತನ ಮಾಡಿಕೊಂಡು ಪರಾರಿಯಾಗಿದ್ದ ಕಳ್ಳರನ್ನು ಹಿಡಿದು ಜೊತೆಗೆ ಅವರಿಂದ ಕಳ್ಳತನವಾಗಿದ್ದರ ಪೈಕಿ 96 ಸಾವಿರ ರೂ. ಗಳನ್ನು ಪೊಲೀಸರು ಜಪ್ತಿಮಾಡಿದ್ದಾರೆ. ಇನ್ನುಳಿದ ಹಣವನ್ನು ಕಳ್ಳರು ಖರ್ಚು ಮಾಡಿದ್ದಾರೆ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.
ಒಟ್ಟಾರೆ ಅಣ್ಣಿಗೇರಿ ಪೊಲೀಸ್ ಠಾಣೆ ಹಾಗೂ ಸಿಪಿಐ ನೇತೃತ್ವದ ಪೊಲೀಸ್ ಸಿಬ್ಬಂದಿ ತಂಡಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.