ಹುಬ್ಬಳ್ಳಿ : ವರಿಷ್ಠರ ಸಮ್ಮತಿ ದೊರೆತ ಹಿನ್ನೆಲೆಯಲ್ಲಿ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಹಾಲಿ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕಮಲ ಪಾಳೆಯದ ಹುರಿಯಾಳಾಗುವುದು ಖಚಿತವಾಗಿದೆ.
ಈ ಮಧ್ಯೆ ಬಿಜೆಪಿ ತಮಗೆ ಟಿಕೆಟ್ ನೀಡುವುದೆಂಬ ವಿಶ್ವಾಸ ಹೊಂದಿರುವುದಾಗಿ ನಿನ್ನೆ ಪಶ್ಚಿಮ ಕ್ಷೇತ್ರದ ಆಕಾಂಕ್ಷಿಯಾಗಿದ್ದ ಮೋಹನ ಲಿಂಬಿಕಾಯಿ ಹೇಳಿದ್ದರೂ ಅವರನ್ನು ಸೆಳೆಯಲು ಕಾಂಗ್ರೆಸ್ ಮತ್ತು ಜೆಡಿಎಸ್ ಮುಂದಾಗಿವೆ ಎನ್ನಲಾಗುತ್ತಿದೆ.
ಇಂದು ದಿಢೀರ್ ಆಗಿ ಬೆಂಗಳೂರಿಗೆ ಲಿಂಬಿಕಾಯಿ ತೆರಳಿದ್ದು, ಮಾಜಿ ಸಚಿವ ವಿನಯ ಕುಲಕರ್ಣಿಯವರ ಮೂಲಕ ಕಾಂಗ್ರೆಸ್ ಸೆಳೆಯಲುಂ ಯತ್ನ ನಡೆದಿದೆ ಎನ್ನಲಾಗಿದೆ.
ಅವರನ್ನು ಮುಂಬರುವ ಲೋಕಸಭಾ ಚುನಾವಣೆಯಿಂದ ಪಕ್ಷದ ಅಭ್ಯರ್ಥಿಯಾಗಿಸಲು ಅಲ್ಲದೇ ಸೂಕ್ತ ಸ್ಥಾನ ನೀಡುವ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎನ್ನಲಾಗುತ್ತಿದೆ.
ಜೆಡಿಎಸ್ ಸಹ ತಮ್ಮಲ್ಲಿದ್ದ ಹೊರಟ್ಟಿಯವರನ್ನು ಸೆಳಿದಿದ್ದಕ್ಕೆ ಪ್ರತಿಯಾಗಿ ಲಿಂಬಿಕಾಯಿ ಅವರನ್ನು ತೆನೆ ಹೊರುವಂತೆ ಮಾಡುವ ಯತ್ನ ಸಹ ನಡೆದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಬೆಂಗಳೂರಿಗೆ ಆಗಮಿಸಿರುವ ಲಿಂಬಿಕಾಯಿ ಅಜ್ಞಾತ ಸ್ಥಳದಲ್ಲಿದ್ದು ಯಾರಿಗೂ ಸಂಪರ್ಕಕ್ಕೆ ಸಿಗುತ್ತಿಲ್ಲವಾಗಿದೆ.