ಹುಬ್ಬಳ್ಳಿ-ಧಾರವಾಡ ಸುದ್ದಿ
’ಹೊರಟ್ಟಿ ಗೆಲ್ಲಿಸಿ ಗಿನ್ನಿಸ್ ದಾಖಲೆ ನಿರ್ಮಾತೃಗಳಾಗಿ’

’ಹೊರಟ್ಟಿ ಗೆಲ್ಲಿಸಿ ಗಿನ್ನಿಸ್ ದಾಖಲೆ ನಿರ್ಮಾತೃಗಳಾಗಿ’

ಶಿಕ್ಷಕ ಮತದಾರರಲ್ಲಿ ಶೆಟ್ಟರ ಮನವಿ

ಹುಬ್ಬಳ್ಳಿ: ನಿರಂತರ ಸಂಘರ್ಷ, ಅವಿರತ ಪರಿಶ್ರಮ ಹಾಗೂ ಅಸಂಖ್ಯಾತ ಹೋರಾಟಗಳ ಮೂಲಕ ರಾಜ್ಯದ ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಗೆ ತಮ್ಮದೆ ಯಾದ ವಿಶಿಷ್ಟ ಕೊಡುಗೆ ನೀಡಿರುವ ಬಸವರಾಜ ಹೊರಟ್ಟಿಯವರು 8 ಬಾರಿ ಐತಿಹಾಸಿಕ ದಾಖಲೆ ನಿರ್ಮಿಸುವ ಮೂಲಕ ಅಭೂತಪೂರ್ವ ವಿಜಯ ಸಾಧಿಸಲಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ವಿಶ್ವಾಸ ವ್ಯಕ್ತಪಡಿಸಿದರು.


ಇಲ್ಲಿಯ ಮೂರುಸಾವಿರಮಠದ ಮಹಿಳಾ ಮಹಾವಿದ್ಯಾಲಯದಲ್ಲಿಂದು ಶಿಕ್ಷಕರ ಸಮಾಲೋಚನಾ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ನಾಲ್ಕು ದಶಕಗಳಿಂದ ಶಿಕ್ಷಣ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಹಗಲಿರುಳು ಶ್ರಮಿಸುತ್ತಾ ಏಳು ಬಾರಿ ವಿಧಾನ ಪರಿಷತ್ ಸದಸ್ಯರಾಗಿ, ಶಿಕ್ಷಣ ಸಚಿವರಾಗಿ, ಸಭಾಪತಿಗಳಾಗಿ ಸುಧೀರ್ಘ ಕಾರ್ಯನಿರ್ವಹಿಸುವ ಮೂಲಕ ಶಿಕ್ಷಕ ಸಮುದಾಯದ ಏಕೈಕ ಆಶಾಕಿರಣವಾಗಿ ಹೊರಟ್ಟಿ ಯವರು ಹೊರಹೊಮ್ಮಿದ್ದು, ಈ ಬಾರಿಯು ಅವರ ಗೆಲುವು ದಾಖಲೆ ಸೃಷ್ಟಿಸಲಿದ್ದು, ಗಿನ್ನಿಸ್ ದಾಖಲೆ ನಿರ್ಮಿಸುವಲ್ಲಿ ತಮ್ಮ ಮತವೂ ಸೇರಿದೆ ಎಂಬ ಆತ್ಮ ತೃಪ್ತಿ ಹೊಂದಲು ಎಲ್ಲ ಶಿಕ್ಷಕರು ಕ್ರೀಯಾಶೀಲವಾಗಿ ಚುನಾವಣೆಯಲ್ಲಿ ಸಕ್ರೀಯರಾಗುವಂತೆ ಮನವಿ ಮಾಡಿದರು.
ಇಂದಿಗೂ ಶಿಕ್ಷಕರ ಬಗೆಗೆ ಪ್ರೀತಿ, ಕಳಕಳಿ ಹಾಗೂ ಅವರ ಸಮಸ್ಯೆಗಳ ಪರಿಹಾರಕ್ಕೆ ಹೋರಾಟ ಮಾಡುವ ದಿಟ್ಟ ಛಲವನ್ನು ಹೊರಟ್ಟಿ ಹೊಂದಿದ್ದಾರೆಂದರು.
ಅಭ್ಯರ್ಥಿ ಬಸವರಾಜ ಹೊರಟ್ಟಿ ಮಾತನಾಡಿ, ಶಿಕ್ಷಕರೆಲ್ಲರೂ ಪಕ್ಷಾತೀತವಾಗಿ, ಜಾತ್ಯಾತೀತವಾಗಿ ನನ್ನನ್ನು ಬೆಂಬಲಿಸಿದ್ದಾರೆ. ಈ ಬಾರಿ ಕನಿಷ್ಠ ಶೇಕಡಾ ೮೦ ರಿಂದ ೯೦ರಷ್ಟು ಶಿಕ್ಷಕರು ನನಗೆ ಪ್ರಥಮ ಪ್ರಾಶಸ್ತ್ಯದ ಮತಚಲಾಯಿಸುವ ಮೂಲಕ ನನ್ನ ಕೈಬಲ ಪಡಿಸುವ ವಿಶ್ವಾಸ ಇದೆ. ಬಿ.ಜೆ.ಪಿ. ಸೇರಿರುವುದ ರಿಂದ ಯಾವುದೇ ಸಮಸ್ಯೆ ಇಲ್ಲ ಹಾಗೂ ಯಾವುದೇ ಭಿನ್ನಾಬಿಪ್ರಾಯೂ ಇಲ್ಲ ಎಂದರು.


ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಮಾತನಾಡಿ, ಬಸವರಾಜ ಹೊರಟ್ಟಿಯವರು ಏಳು ಬಾರಿ ಸತತವಾಗಿ ಶಿಕ್ಷಕರ ಕ್ಷೇತ್ರದಿಂದ ಗೆಲವು ಸಾಧಿಸಿದ್ದಾರೆ. ಶಿಕ್ಷಕರ ಕಲ್ಯಾಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಹೊರಟ್ಟಿಯವರನ್ನು ಎಂಟನೇ ಬಾರಿಯೂ ಸಹ ಗೆಲ್ಲಿಸುವ ಮೂಲಕ ವಿಶ್ವ ದಾಖಲೆ ನಿರ್ಮಿಸಲು ಎಲ್ಲ ಶಿಕ್ಷಕರು ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವಿ ಮಾಡಿದರು.
ಮಹಿಳಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಲಿಂಗರಾಜ ಅಂಗಡಿ ಮಾತನಾಡಿ, ಜಾತಿ, ಮತ, ಪಂಥವಿಲ್ಲದೇ ಸಮಸ್ತ ಶಿಕ್ಷಕ ಸಮುದಾಯ ಹೊರಟ್ಟಿಯವರನ್ನು ಅತೀ ಹೆಚ್ಚಿನ ಸಂಖ್ಯೆಯಲ್ಲಿ ಎಲ್ಲರೂ ಬೆಂಬಲಿಸಲಿದ್ದಾರೆ ಎಂದು ಅಂಗಡಿ ತಿಳಿಸಿದರು.
ಸಭೆಯಲ್ಲಿ ಮೂರುಸಾವಿರ ಮಠದ ವಿದ್ಯಾಸಂಸ್ಥೆಗಳ ಶಾಲೆಗಳ ೫೦೦ಕ್ಕೂ ಹೆಚ್ಚು ಶಿಕ್ಷಕರು, ಪ್ರಾಧ್ಯಾಪಕರು ಪಾಲ್ಗೊಂಡಿದ್ದರು.
ಪದವಿಪೂರ್ವ ಮಹಾವಿದ್ಯಾಲಯ ಪ್ರಾಚಾರ್ಯೆ ಅನುರಾಧಾ ಹೊಸಕೋಟಿ, ಬಿ.ಎಮ್.ಸಾಲಿಮಠ, ನವಲಗುಂದ, ಅಂಜಲಿ ಕರಬಸಣ್ಣವರ, ಆರ್.ಜಿ. ಮರಿಬಾಶೆಟ್ಟಿ, ಎಸ್.ಎಸ್. ಮಠದ, ವಿಕಾಸ ರಬಕವಿಮಠ, ಜಯಾ ಅಂಗಡಿ, ಪಾಲಿಕೆ ಸದಸ್ಯ ರಾಜಣ್ಣ ಕೊರವಿ, ಶಿಕ್ಷಕ ಸಂಘಟನೆಗಳ ಪ್ರಮುಖರಾದ ವಿ.ಎಸ್.ಹುದ್ದಾರ, ಎಸ್‌ವಿ.ಪಟ್ಟನಶೆಟ್ಟಿ, ರವಿ ಕೊಣ್ಣುರ, ಎಸ್.ಬಿ.ಹಿರೇಮಠ, ಶಿರಿಲ್ ಸುಧಾಕರ, ಎನ್.ಎಫ್.ತುಕ್ಕಣ್ಣವರ, ಬಿ.ಎಸ್.ಗೌಡರ, ಎನ್.ವಿ. ದೇಶನೂರ, ಮುತ್ತುರಾಜ ಮತ್ತಿಕೊಪ್ಪ ಮತ್ತಿತರರು ಉಪಸ್ಥಿತರಿದ್ದರು.

 

administrator

Related Articles

Leave a Reply

Your email address will not be published. Required fields are marked *