ಗಾಂಧಿ ಟೋಪಿ ಧರಿಸಿ ಸಜ್ಜಾದ ಪಾದಯಾತ್ರಿಗಳು
ಧಾರವಾಡ: ಲೋಕ ಕಲ್ಯಾಣಾರ್ಥವಾಗಿ ಪಾದಯಾತ್ರೆ ಮಾಡುತ್ತಿರುವ ನಗರದ ಕಿರಣ ಗೆಳೆಯರ ಬಳಗದಿಂದ ಆ.14 ರಂದು ಹುಬ್ಬಳ್ಳಿಯ ಸಿದ್ಧಾರೂಢರ ಮಠಕ್ಕೆ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಬಳಗದ ಕಿರಣ ಹಾವಣಗಿ ತಿಳಿಸಿದ್ದಾರೆ.
ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪಾದಯಾತ್ರಿಗಳಲ್ಲಿ ಹೊಸ ಹುರುಪು ಮೂಡಿದ್ದು, ಎಲ್ಲರೂ ಗಾಂಧಿ ಟೋಪಿಯೊಂದಿಗೆ ಪಾದಯಾತ್ರೆಗೆ ಸಜ್ಜಾಗಿದ್ದಾರೆ. ಅಂದು ಸಂಜೆ 6.30ಕ್ಕೆ ಧಾರವಾಡದ ಎನ್ಟಿಟಿಎಫ್ ಹತ್ತಿರದ ಸಿದ್ಧಿವಿನಾಯಕ ಮಂದಿರದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಿಸಲಿದೆ. ತಮ್ಮ ತಮ್ಮ ಉದ್ಯೋಗಗಳ ಜೊತೆ ಜೊತೆಗೆ ಸಾಮಾಜಿಕ ಕಾರ್ಯಕ್ಕೆ, ಸಮಾಜದ ಏಳಿಗೆಗಾಗಿ ತಮ್ಮ ಅಳಿಲು ಸೇವೆ ಸಲ್ಲಿಸುತ್ತಿರುವ ಧಾರವಾಡದ ಕಿರಣ ಗೆಳೆಯರ ಬಳಗ ಲೋಕ ಕಲ್ಯಾಣದ ಜೊತೆಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ಈ ಬಾರಿ ಧಾರವಾಡದಿಂದ ಹುಬ್ಬಳ್ಳಿ ಸಿದ್ಧಾರೂಢ ಅಜ್ಜನ ಮಠಕ್ಕೆ ಪಾದಯಾತ್ರೆ ನಡೆಸಲಿದೆ.
ಸುಮಾರು 10ವರ್ಷದಿಂದ ಪ್ರತಿ ಶ್ರಾವಣ ಮಾಸದಲ್ಲಿ ಲೋಕ ಕಲ್ಯಾಣಾರ್ಥವಾಗಿ ಪಾದಯಾತ್ರೆ ನಡೆಸುತ್ತಾ ಬಂದಿರುವ ಈ ಬಳಗ ಈ ಹಿಂದೆ ಎರಡು ವರ್ಷ ಕೊರೊನಾ ಮಹಾಮಾರಿಯಿಂದ ನಲುಗಿರುವ ಭಾರತ ಕೊರೊನಾ ಮುಕ್ತವಾಗಲಿ, ಆರ್ಥಿಕವಾಗಿ ಮತ್ತೆ ಪುಟಿದೇಳಲಿ ಎಂದು ಪ್ರಾರ್ಥಿಸಿ ಸಿದ್ಧಿವಿನಾಯಕ ಮಂದಿರದಲ್ಲಿ ಪೂಜೆ ಸಲ್ಲಿಸಿ ಅಲ್ಲಿಂದ ಪಾದಯಾತ್ರೆ ಆರಂಭಿಸಿತ್ತು.
ಕೊರೊನಾ ಬಂದಾಗಿನಿಂದ ಸರಿಯಾಗಿ ಉದ್ಯೋಗವಿಲ್ಲದೇ ಜನ ಬಸವಳಿದಿದ್ದಾರೆ. ಈ ರೋಗದಿಂದ ದೇಶವನ್ನು ನೀನೇ ಕಾಪಾಡು ಪ್ರಭುವೇ ಎಂದು ಅಜ್ಜನ ಮೊರೆ ಹೋಗಿರುವ ಬಳಗ, ಬೇಡಿಕೆ ಈಡೇರಲೆಂದು ಸಿದ್ಧಿ ವಿನಾಯಕನಿಗೆ ಮೊದಲು ಪೂಜೆ ಸಲ್ಲಿಸಿ ಪಾದಯಾತ್ರೆ ನಡೆಸಿತ್ತು. ಈ ಬಾರಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕಿರಣ ತಿಳಿಸಿದ್ದಾರೆ.
ಪಾದಯಾತ್ರೆಯಲ್ಲಿ ಸಂಭಾಜಿರಾವ ಘೊಡಸೆ, ವಿನಯ ಮಹೇಂದ್ರಕರ, ಪ್ರತಾಪ ಕಾಮತ, ವಿನಯ ಶಿಂಧೆ, ಕುಮಾರ ಚಿನಿವಾಲ, ಸತೀಶ ಹೆಗಡೆ, ದೀಪಕ ಪಾಟೀಲ, ಶಾಕೀರ ಬಡೆ ಬಡೆ, ತುರಾಬ ಮೈಸೂರ, ಸತೀಶ ವೀರಾಪುರ, ವೃಷಭ ಹಿರೇಮಠ, ಸಂತೋಷ ಸೂರ್ಯವಂಶಿ, ಸುನೀಲ ಸೂರ್ಯವಂಶಿ, ಪ್ರಜ್ವಲ, ಸಂದೇಶ, ಡಾ.ಕಿರಣ ಬೆಲ್ಲದ, ಕೃಷ್ಣಾ, ಬಸಾಪುರ, ಅಶೋಕ ಪಾಟೀಲ, ನವೀನ ಮಲ್ಲನಗೌಡರ, ಅಜಯ ಉಡಕೇರಿ, ಸಂಜಯ ಕಡಕೋಳ, ಕಿಶೋರ ಹಾವಣಗಿ, ಆಶೀಷ್ ಹಾವಣಗಿ, ಆನಂದ ಉತ್ತರಕರ, ಕಾಳೆ, ಚಿನ್ಮಯ ಹಾವಣಗಿ, ಪ್ರಸನ್ನಕುಮಾರ ಹಿರೇಮಠ ಸೇರಿದಂತೆ ಸೇರಿದಂತೆ ಅನೇಕ ಸದಸ್ಯರು, ಯುವಕರು, ಮಕ್ಕಳು, ಮಹಿಳೆಯರು ಪಾಲ್ಗೊಳ್ಳಲಿದ್ದಾರೆ.