ಖಾಕಿಗಳ ಮೇಲೆ ಹಲ್ಲೆ ಮಾಡಿದ ಮುಂಬೈ ಮೂಲದ ಫರ್ಹಾನ್
ಹುಬ್ಬಳ್ಳಿ : ಕಳೆದ ದಿ. 16ರಂದು ಬೆಳಗಿನ ಜಾವ ಕೇಶ್ವಾಪುರದ ರಮೇಶ ಭವನದಿಂದ ಕೂಗಳತೆ ದೂರದಲ್ಲಿರುವ ಭುವನೇಶ್ವರಿ ಜ್ಯುವೆಲರ್ಸ ಆಭರಣ ಅಂಗಡಿ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆಯಲಾದ ಮುಂಬೈ ಮೂಲದ ಕುಖ್ಯಾತ ಆರೋಪಿ ಫರ್ಹಾನ್ ಶೇಖ ಮೇಲೆ ಪೊಲೀಸರು ಗುಂಡು ಹಾರಿಸಿದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಗಾಮನಗಟ್ಟಿ ರಸ್ತೆಯ ತಾರಿಹಾಳ ಕ್ರಾಸ್ ಬಳಿ ಬೆಳಿಗ್ಗೆ 6-30 ರ ಸುಮಾರಿಗೆ ವಿಚಾರಣೆಗೆ ಕರೆದೊಯ್ಯುತ್ತಿರುವ ಸಂದರ್ಭದಲ್ಲಿ ಫರ್ಹಾನ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಲು ಓಡಿ ಪರಾರಿಯಾಗಲು ಯತ್ನ ನಡೆಸಿದಾಗ ಕೇಶ್ವಾಪುರ ಇನ್ಸಪೆಕ್ಟರ್ ಹತ್ತಿ ಮತ್ತು ಪಿಎಸ್ಐ ಕವಿತಾ ಮಡಗ್ಯಾಳ ಎಚ್ಚರಿಕೆ ನೀಡಿದರೂ ಪಿಎಸ್ಐ ಕವಿತಾ ಗುಂಡು ಹಾರಿಸಿದ್ದಾರೆ.
ಫರ್ಹಾನ ಕಾಲಿಗೆ ಗುಂಡೇಟು ಬಿದ್ದಿದ್ದು, ಗಾಯಗೊಂಡ ಆತನನ್ನು ಪುನಃ ವಶಕ್ಕೆ ಪಡೆದು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲದೇ ಪರಾರಿ ಯತ್ನದಲ್ಲಿ ಆರೋಪಿಯಿಂದ ಹಲ್ಲೆಗೊಳಗಾದ ಸಿಬ್ಬಂದಿಗಳಾದ ಮಹೇಶ ಮತ್ತು ಸುಜಾತಾ ಅವರನ್ನೂ ಆಸ್ಪತ್ರೆಗೆ ದಾಖಲಿಸಿದ್ದು, ಅಪಾಯದಿಂದ ಪಾರಾಗಿದ್ದಾರೆ.
ಕಿಮ್ಸ್ ಆಸ್ಪತ್ರೆಗೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಭೇಟಿ ನೀಡಿ ಸಿಬ್ಬಂದಿ ಅಲ್ಲದೇ ಆರೋಪಿಯ ಸ್ಥಿತಿ ಗತಿ ವಿಚಾರಿಸಿದರು.
ಫರ್ಹಾನ ಮೇಲೆ ಹೈದ್ರಾಬಾದ್, ಅಹ್ಮದನಗರ, ಕಲಬುರಗಿ, ಸೂರತ್ ಮುಂಬೈನಗರ ಸೇರಿ ವಿವಿಧ ಕಡೆ 15ಕ್ಕೂ ಹೆಚ್ಚು ದರೋಡೆ, ಕಳ್ಳತನ ಮುಂತಾದ ಪ್ರಕರಣಗಳಿವೆ.