ಹುಬ್ಬಳ್ಳಿ-ಧಾರವಾಡ ಸುದ್ದಿ

ಆಪರೇಷನ್ ಕಮಲದಲ್ಲೇ ಬಿಜೆಪಿ ಸಿದ್ಧಾಂತ ಮಣ್ಣುಪಾಲು

ಬಿಎಸ್‌ವೈ ಟೀಕೆಗಳೆ ಗೆಲುವಿಗೆ ಶ್ರೀರಕ್ಷೆ

ಬಡಪಾಯಿ ಶೆಟ್ಟರ್ ಸೋಲಿಸುವ ಒಂದಂಶದ ಅಭಿಯಾನಕ್ಕೆ ಯಶಸ್ಸು ಸಿಗದು

ಜೋಶಿ ರಾಜಕೀಯ ಬಹಳ ದಿನ ನಡೆಯಲ್ಲ

ಹುಬ್ಬಳ್ಳಿ: ಈ ಹಿಂದೆ ಆಪರೇಷನ್ ಕಮಲ ಮಾಡಿ ಸರ್ಕಾರ ರಚನೆ ಮಾಡಿದಾಗಲೇ ಬಿಜೆಪಿ ತತ್ವಸಿದ್ದಾಂತಗಳು ಮಣ್ಣುಪಾಲಾಗಿವೆ. ಹೀಗಾಗಿ ಇದೀಗ ನನ್ನ ಬಗ್ಗೆ ಮಾತನಾಡುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಕೇಸರಿ ಪಡೆ ವಿರುದ್ದ ಕಿಡಿ ಕಾರಿದರು.


ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿಯನ್ನು ಒಡೆದು ಕೆಜಿಪಿ ಪಕ್ಷ ಕಟ್ಟಿದ್ದರು. ಆಗ ಅವರ ತತ್ವಸಿದ್ದಾಂತ ಎಲ್ಲಿಗೆ ಹೋಗಿತ್ತು. ಹೀಗಾಗಿ ನಾನು ಪಕ್ಷಕ್ಕೆ ದ್ರೋಹ ಮಾಡಿಲ್ಲ. ಯಾವ ಹಿನ್ನೆಲೆಯಲ್ಲಿ ಬಿಜೆಪಿಯನ್ನು ತ್ಯಜಿಸಿದ್ದೇನೆ ಎಂಬುದನ್ನು ಈಗಾಗಲೇ ತಿಳಿಸಿದ್ದೇನೆ. ನನ್ನ ಸ್ವಾಭಿಮಾನಕ್ಕೆ ದಕ್ಕೆ ಉಂಟಾಗಿ ಹೊರಗಡೆ ಬಂದಿದ್ದೇನೆ ಎಂದರು.


ಹಿಂದೆ ಯಡಿಯೂರಪ್ಪ ಅವರೇ ನನಗೆ ಟಿಕೆಟ್ ಕೊಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ಜಗದೀಶ್ ಶೆಟ್ಟರ್ ಅವರಿಗೆ ಟಿಕೆಟ್ ಕೈತಪ್ಪಿಸಿದರೇ ಪಕ್ಷಕ್ಕೆ ತುಂಬಾ ಡ್ಯಾಮೇಜ್ ಆಗಲಿದೆ ಎಂದಿದ್ದರು. ಹೀಗಾಗಿ ಅವರು ನನಗೆ ಟಿಕೆಟ್ ಕೊಡಿಸಲು ಬಹಳ ಪ್ರಯತ್ನ ಮಾಡಿದ್ದಾರೆ. ಆದರೆ ಆಬಳಿಕ ಅವರು ಅಸಹಾಯಕಕಾಗಿ ಮಾತನಾಡುತ್ತಿದ್ದಾರೆ. ಅವರ ಟೀಕೆಗಳು ನನಗೆ ಆರ್ಶೀವಾದ ಇದ್ದ ಹಾಗೇ. ಅವರ ಟೀಕೆಗಳೆ ನನಗೆ ಗೆಲುವಿಗೆ ಶ್ರೀರಕ್ಷೆ ಆಗಲಿದೆ ಎಂದರು.


ನಾನೊಬ್ಬ ಬಡಪಾಯಿ ಶೆಟ್ಟರ್ ಆದರೆ ನನ್ನ ಮೇಲೆ ಬಿಜೆಪಿ ಸೋಲಿಸುವ ಅಭಿಯಾನ ಮಾಡುತ್ತಿದೆ. ಹು-ಧಾ ಸೆಂಟ್ರಲ್ ವಿಧಾನಸಭಾ ಮತಕ್ಷೇತ್ರ ಕೇವಲ ಹುಬ್ಬಳ್ಳಿಗೆ ಮಾತ್ರ ಸೀಮಿತವಲ್ಲ, ರಾಜ್ಯದ ಸೆಂಟ್ರಲ್ ಕ್ಷೇತ್ರವಾಗಿದೆ. ಅಷ್ಟೇ ಅಲ್ಲದೇ ರಾಷ್ಟ್ರದಾದ್ಯಂತ ಕ್ಷೇತ್ರದ ವಿಷಯ ಚರ್ಚೆ ಆಗುತ್ತಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಹುಬ್ಬಳ್ಳಿಗೆ ಆಗಮಿಸಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸಬೇಕೆಂಬ ಮಾತುಗಳನ್ನು ಆಡಿದ್ದಾರೆ. ಜೊತೆಗೆ ಬಿ.ಎಸ್. ಯಡಿಯೂರಪ್ಪ ಅವರೂ ಕೂಡಾ ಮಂಗಳವಾರ ಪ್ರಮುಖರ ಸಭೆ ನಡೆಸಿ ನನ್ನ ಸೋಲಿಸಲು ಆಂದೋಲನ ನಡೆಸಿದ್ದಾರೆ. ಯಾಕಿಷ್ಟು ಬಡಪಾಯಿ ಶೆಟ್ಟರ್’ಗೆ ಸೋಲಿಸುವ ಗುರಿಯನ್ನು ಬಿಜೆಪಿ ಮಾಡಿಕೊಂಡಿದೆ ಗೊತ್ತಾಗುತ್ತಿಲ್ಲ ಎಂದರು.


ನಾನಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಆಗಿಲ್ಲ, ನನ್ನಂತೆಯೇ ಆಯನೂರು ಮಂಜುನಾಥ, ಲಕ್ಷ್ಮಣ ಸವದಿ, ಯಲ್ಲಾಪುರದಲ್ಲಿ ಮಾಜಿ ಶಾಸಕ ವಿ.ಎಸ್.ಪಾಟೀಲ , ಎನ್.ಆರ್. ಸಂತೋಷ ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆ ಆಗಿದ್ದಾರೆ. ಆದರೆ ನಾನು ಯಾವುದೋ ಅಪರಾಧ ಮಾಡಿದಂತೆ ಎಲ್ಲರೂ ನನಗೆ ಪ್ರಶ್ನೆ ಮಾಡುತ್ತಿದ್ದಾರೆ ಎಂದರು.
ರಾಜ್ಯದಲ್ಲಿ ಲಿಂಗಾಯತ ನಾಯಕರನ್ನು ಮತ್ತೊಬ್ಬ ಲಿಂಗಾಯತ ನಾಯಕರ ವಿರುದ್ಧ ಟೀಕೆ ಮಾಡಿಸಲಾಗುತ್ತಿದೆ. ಈ ಮೂಲಕ ಮತ್ತೊಬ್ಬರ ಹೆಗಲಿನ ಮೇಲೆ ಬಂದೂಕು ಇಟ್ಟು ಗುಂಡು ಹಾರಿಸುವ ಕೆಲಸ ಮಾಡಲಾಗುತ್ತಿದೆ ಎಂದು ಪರೋಕ್ಷವಾಗಿ ಬಿ.ಎಲ್. ಸಂತೋಷ ಅವರಿಗೆ ತಿರುಗೇಟು ನೀಡಿದರು.


ನನ್ನ ವಿರುದ್ಧ ಯಾರೇ ಎಷ್ಟೇ ಟೀಕೆ ಮಾಡಲಿ, ನಾನು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಯಾಗಿ ಪ್ರಚಾರ ಮಾಡತ್ತಾ ಇದ್ದೇನೆ. ಈ ಹಿಂದೆ ೬ ಬಾರಿ ಚುನಾವಣೆಗಿಂತಲೂ ಅತಿಹೆಚ್ಚು ಮತಗಳನ್ನು ಪಡೆಯುವ ಮೂಲಕ ಏರನೇ ಬಾರಿಗೆ ಶಾಸಕನಾಗುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಗೋಷ್ಠಿಯಲ್ಲಿ ಉಸ್ತುವಾರಿಗಳಾದ ರೋಹನ್ ಗುಪ್ತ, ಮುಖಂಡರಾದ ಸದಾನಂದ ಡಂಗನವರ, ರಜತ್ ಉಳ್ಳಾಗಡ್ಡಿಮಠ, ಮಲ್ಲಿಕಾರ್ಜುನ ಸಾಹುಕಾರ, ನಾಗೇಶ ಕಲಬುರಗಿ ಇದ್ದರು.

ಜೋಶಿ ರಾಜಕೀಯ ಬಹಳ ದಿನ ನಡೆಯಲ್ಲ

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತತ್ವಸಿದ್ದಾಂತಗಳಿಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಆಗಿದ್ದಾರೆಂಬ ಹೇಳಿಕೆ ಕೊಟ್ಟಿದ್ದಾರೆ. ಟಿಕೆಟ್ ವಿಚಾರದಲ್ಲಿ ಪ್ರಲ್ಹಾದ್ ಜೋಶಿ ಬಹಳ ರಾಜಕಾರಣ ಮಾಡಿದ್ದಾರೆ. ಅದು ಬಹಳ ದಿನ ನಡೆಯೋದಿಲ್ಲ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಿದ್ದಾರೆ. ಅಪರಾಧಿ ಹಿನ್ನೆಲೆಯುಳ್ಳವರಿಗೆ ಟಿಕೆಟ್ ನೀಡಲಾಗಿದೆ. ಆದರೆ ಹಿರಿತನಕ್ಕೆ ಬೆಲೆ ಕೊಡದೇ ಟಿಕೆಟ್ ಕೈತಪ್ಪಿಸಿದ್ದು ಸ್ವಾಭಿಮಾನಕ್ಕೆ ದಕ್ಕೆ ತರಲಾಯಿತು. ಈ ದಿಸೆಯಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದು, ಈ ಬಾರಿ ಅತ್ಯಧಿಕ ಮತಗಳನ್ನು ಪಡೆದು ಗೆದ್ದು ಬರಲಿದ್ದೇನೆ ಎಂದು ಜಗದೀಶ್ ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

administrator

Related Articles

Leave a Reply

Your email address will not be published. Required fields are marked *