ಹುಬ್ಬಳ್ಳಿ: ಮಹಾನಗರ ಪಾಲಿಕೆಯ 52ನೇ ವಾರ್ಡಿನ ಪಕ್ಷೇತರ ಸದಸ್ಯ ಚೇತನ ಹಿರೇಕೆರೂರ ರವಿವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೂಲಕ ತನ್ನ ನೆಲೆ ವಿಸ್ತರಿಸುವ ಕಾರ್ಯದಲ್ಲಿ ಯಶಸ್ವಿಯಾಗಿದೆ.
ನಗರದ ಕಾರವಾರ ರಸ್ತೆಯ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪಕ್ಷ ಸೇರಿದ ಚೇತನ್ರನ್ನು ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಪಕ್ಷದ ಚಿಹ್ನೆಯುಳ್ಳ ಶಾಲು ಹೊದಿಸಿ ಬರಮಾಡಿಕೊಂಡರು.
ಕಳೆದ ಚುನಾವಣೆಯಲ್ಲಿ ವಾರ್ಡಿನಾದ್ಯಂತ ತನ್ನದೇ ಆದ ಯುವ ಕಾರ್ಯಕರ್ತರ ಪಡೆ ಹೊಂದಿರುವ ಚೇತನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮಾಜಿ ಮೇಯರ್ ಪ್ರಕಾಶ ಕ್ಯಾರಕಟ್ಟಿ ಮತ್ತು ಬಿಜೆಪಿಯ ಹುರಿಯಾಳನ್ನು ಹಿಮ್ಮೆಟ್ಟಿಸಿ ಭರ್ಜರಿ ಗೆಲುವಿನ ಬಾವುಟ ಹಾರಿಸಿದ್ದರು.
2-3 ವರ್ಷಗಳ ಹಿಂದಿನವರೆಗೂ ಕೇವಲ ಬಿಜೆಪಿಯತ್ತ ಮುಖ ಮಾಡುತ್ತಿದ್ದ ಉಳಿದ ಪಕ್ಷಗಳ ಧುರೀಣರು ಕಳೆದ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಮಾಡಿದ ಗಮನಾರ್ಹ ಸಾಧನೆ ನಂತರ ಅನೇಕರು ಕೈ ಹಿಡಿಯುತ್ತಿದ್ದು ಈಗಾಗಲೇ ಮಾಜಿ ಪಾಲಿಕೆ ಸದಸ್ಯ ಹೂವಪ್ಪ ದಾಯಗೋಡಿ, ಗೋಪಾಲ ಎಣ್ಣಚವಂಡಿ ಮುಂತಾದವರು ಸೇರ್ಪಡೆಯಾದ ಬೆನ್ನಲ್ಲೆ ಚೇತನ ಸೇರ್ಪಡೆ ಪಕ್ಷಕ್ಕೆ ಮತ್ತಷ್ಟು ಬಲ ತಂದುಕೊಟ್ಟಿದೆ.
ಗೋಕುಲ ರಸ್ತೆಯ ಪ್ರಮುಖ 3 ವಾರ್ಡಗಳಲ್ಲಿ ಬಿಜೆಪಿ ಸ್ವಚ್ಛತಾ ಅಭಿಯಾನ ಈಗಾಗಲೇ ಆಗಿದ್ದು ಈಗ ೫೨ನೇ ವಾರ್ಡಿನಲ್ಲಿ ಕೈ ಪಾಳೆಯಕ್ಕೆ ಮತ್ತಷ್ಟು ನೆಲೆ ಸಿಕ್ಕಂತಾಗಿದೆ.ಇನ್ನೂ 3-4 ಮಾಜಿ ಪಾಲಿಕೆ ಸದಸ್ಯರು ಕಾಂಗ್ರೆಸ್ ಸೇರುವುದು ಬಹುತೇಕ ನಿಶ್ಚಿತವಾಗಿದ್ದು, ಕಮಲ ಪಾಳೆಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.
ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ವಿದ್ಯಾನಗರ ಬ್ಲಾಕ್ ಅಧ್ಯಕ್ಷ ರಜತ ಉಳ್ಳಾಗಡ್ಡಿಮಠ ಇನ್ನಿತರ ಮುಖಂಡರು ಈ ಸಂದರ್ಭದಲ್ಲಿದ್ದರು.