ಜೂ.8ರಂದು ಬಸವರಾಜ ಗುರಿಕಾರ ಪರ ಸಿದ್ದರಾಮಯ್ಯ ಪ್ರಚಾರ
ಧಾರವಾಡ: ವಿಧಾನಸಭಾ ಪಶ್ಚಿಮ ಮತಕ್ಷೇತ್ರದ ಕಾಂಗ್ರಸ್ ಅಭ್ಯರ್ಥಿ ಬಸವರಾಜ ಗುರಿಕಾರ ಪರ ಪ್ರಚಾರ ನಡೆಸಲು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜೂ. 8 ರಂದು ಧಾರವಾಡದಲ್ಲಿ ನಡೆಯುವ ಪ್ರಚಾರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ನಗರದ ದೈವಜ್ಣ ಕಲ್ಯಾಣ ಮಂಟಪದಲ್ಲಿ ಜೂನ್ 8 ರಂದು ಬೆಳಗ್ಗೆ 10.30ಕ್ಕೆ ಸಭೆ ನಡೆಯಲಿದೆ ಎಂದರು.
ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರು ಒಗ್ಗಟ್ಡಿನಿಂದ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಮತಕ್ಷೇತ್ರ ವ್ಯಾಪ್ತಿಯ ಪಕ್ಷದ ಮುಖಂಡರು ಗುರಿಕಾರ ಅವರ ಆಯ್ಕೆಗಾಗಿ ಯತ್ನಿಸುತ್ತಿದ್ದಾರೆ. ಶಿಕ್ಷಕರು ಈ ಬಾರಿ ಬದಲಾವಣೆ ತರಲು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.
ಬಸವಣ್ಣನ ತತ್ವ ನಂಬಿಕೊಂಡಿದ್ದ ಬಸವರಾಜ ಹೊರಟ್ಟಿ ಕೋಮುವಾದಿ ಬಿಜೆಪಿಗೆ ಸೇರಿಕೊಳ್ಳುವ ಮೂಲಕ ತಮ್ಮ ನೈಜ ಬಣ್ಣ ಪ್ರದರ್ಶಿಸಿದ್ದಾರೆ ಎಂದರು.
ಕರ್ನಾಟಕ ವಿಶ್ವವಿದ್ಯಾಲಯ ಕೂಡಲೇ ಅತಿಥಿ ಉಪನ್ಯಾಸಕರಿಗೆ ವೇತನ ಹೆಚ್ಚಳ ಮಾಡಬೇಕು. ಕುಲಪತಿ ಸರಕಾರದ ಮೇಲೆ ಒತ್ತಡ ತಂದು ಅಗತ್ಯ ಅನುದಾನ ಪಡೆದುಕೊಳ್ಳಬೇಕು. ಒಂದು ವೇಳೆ ಅತಿಥಿ ಉಪನ್ಯಾಸಕರ ವೇತನ ಹೆಚ್ಚಿಸಲು ಸಾಧ್ಯವಾಗದಿದ್ದರೆ ಕುಲಪತಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಕಾಂಗ್ರೆಸ್ ಮುಖಂಡರಾದ ಡಾ. ಶರಣಪ್ಪ ಕೊಟಗಿ, ಹಜರತ ಅಲಿ ಗೊರವನಕೊಳ್ಳ, ಯಾಸೀನ್ ಹಾವೇರಿಪೇಟ, ರೋಹಣ ಹಿಪ್ಪರಗಿ ಗೋಷ್ಠಿಯಲ್ಲಿದ್ದರು.