ಸಮೃದ್ಧ, ಸುರಕ್ಷಿತ, ಸನ್ಮಾನಿತ, ಸ್ವಸ್ಥ ಹಿಂದೂ ಸಮಾಜಕ್ಕೆ ಸಂಕಲ್ಪ
ಹುಬ್ಬಳ್ಳಿ: ಸಶಕ್ತ ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಹಿಂದೂಗಳು ಮೂರು ಮಕ್ಕಳನ್ನು ಹೆರಬೇಕೆಂದು ಕರೆ ನೀಡಿದ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಸಂಸ್ಥಾಪಕ ಅಧ್ಯಕ್ಷ ಡಾ. ಪ್ರವೀಣಭಾಯಿ ತೊಗಾಡಿಯಾ ಹೇಳಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರನೇ ಮಗುವಿನ ಶೈಕ್ಷಣಿಕ ಜವಾಬ್ದಾರಿಯನ್ನು ಪರಿಷತ್ ವಹಿಸಿಕೊಳ್ಳುತ್ತದೆ ಎಂದು ಘೋಷಿಸಿದರು.
ಹಿಂದೂಗಳ ಸುರಕ್ಷತೆ ನಮ್ಮ ಮುಖ್ಯ ಧ್ಯೇಯ. ಹಿಂದೂಗಳ ಜನಸಂಖ್ಯೆ ಹೆಚ್ಚಿಸಬೇಕಿರುವುದು ನಮ್ಮ ಜವಾಬ್ದಾರಿಯಾಗಿದೆ. ಹೀಗಾಗಿ ಪ್ರತಿಯೊಬ್ಬ ಹಿಂದೂ ದಂಪತಿ ಮೂರು ಮಕ್ಕಳನ್ನು ಹೆರಬೇಕು. ’ತೀನ್ ಬಚ್ಚೆ, ಹಿಂದೂ ಸಚ್ಚೆ; ಬಾಕಿ ಸಬ್ ಕಚ್ಚೆ’ ಎಂದು ಹೇಳಿದರು.
ಮೂರು ಮಕ್ಕಳನ್ನು ಹೆರುವ ಹಿಂದೂ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು. ಜೊತೆಗೆ, ಮೂರನೇ ಮಗುವಿನ ಶೈಕ್ಷಣಿಕ ಜವಾಬ್ದಾರಿಯನ್ನು ಸಹ ನಾವೇ ಹೊರುತ್ತೇವೆ ಎಂದರು.
ಕರ್ನಾಟಕ ರಾಜ್ಯದಲ್ಲಷ್ಟೇ ಅಲ್ಲ. ದೇಶದ ಎಲ್ಲ ರಾಜ್ಯಗಳಲ್ಲಿಯೂ ಸರ್ಕಾರ ಯಾವುದೇ ಇರಲಿ ಹಿಂದೂಗಳ ಸುರಕ್ಷತೆ ಬಗ್ಗೆ ಪ್ರಶ್ನೆ ಮೂಡುವಂತಾಗಿದೆ ಎಂದ ತೊಗಾಡಿಯಾ, ಪೆಹಲ್ಗಾಮ್, ಅಸ್ಸಾಂ, ಪಶ್ಚಿಮ ಬಂಗಾಲ ಸೇರಿದಂತೆ ವಿವಿಧೆಡೆ ಹಿಂದೂಗಳ ಮೇಲೆ ನಡೆದ ದೌರ್ಜನ್ಯಗಳನ್ನು ಉದಾಹರಿಸಿದರು.
ಸಂವಿಧಾನದ ಭರವಸೆ, ಆಶಯದ ಮೇಲೆ ರಚಿತವಾದ ಸರ್ಕಾರ ಯಾವುದೇ ಪಕ್ಷವಾಗಿರಲಿ, ಹಿಂದೂಗಳ ರಕ್ಷಣೆ ವಿಷಯದಲ್ಲಿ ತಾರತಮ್ಯ ಮಾಡಬಾರದು. ರಾಜಕೀಯ, ರಾಜನೀತಿಯನ್ನು ಬದಿಗಿಟ್ಟು ಹಿಂದುಗಳ ರಕ್ಷಣೆಗೆ ಮುಂದಾಗಬೇಕು. ಹಿಂದೂಗಳ ಹಿತರಕ್ಷಣೆ, ಸುರಕ್ಷತೆಗಾಗಿ ಎಲ್ಲ ಸರ್ಕಾರಗಳು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಕನಸು ನಿಮ್ಮದೇ ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ’ಭಾರತ ಹಿಂದೂ ರಾಷ್ಟ್ರವೇ ಆಗಿದೆ. ಆದರೆ, ಅದು ದೇಶದ ಜನತೆಯ ಅನುಭವಕ್ಕೆ ಬರುವಂತೆ ಮಾಡಬೇಕಾಗಿದೆ’ ಎಂದರು.
೨೦೧೪ರ ನಂತರದ ಭಾರತದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ’ದೇಶವನ್ನು ರಾಜಕೀಯ ಪಕ್ಷಗಳಿಂದ ವಿಂಗಡಿಸಬಾರದು. ೧೯೪೭ರ ಸ್ವಾತಂತ್ರ್ಯಾನಂತರ ಭಾರತ ಸಾಕಷ್ಟು ಅಭಿವೃದ್ಧಿ ಹೊಂದಿ, ಮಹಾನ್ ಭಾರತ ಆಗುತ್ತಿದೆ. ಆರ್ಥಿಕತೆ, ತಂತ್ರಜ್ಞಾನದೊಂದಿಗೆ ಮುಂದುವರಿಯುತ್ತಿದೆ’ ಎಂದು ಹೇಳಿದರು.
ಪೆಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಭಾರತ ನಡೆಸಿದ ಆಪರೇಷನ್ ಸಿಂಧೂರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಪಾಕಿಸ್ತಾನದ ಗಡಿದಾಟಿ ಹೊಡೆದಿದ್ದು ಉತ್ತಮ. ಆದರೆ, ಇದು ಇನ್ನಷ್ಟು ಹೆಚ್ಚಾಗಿದ್ದರೆ ಹಿಂದೂಗಳು ಮತ್ತಷ್ಟು ಸಂತಸಗೊಳ್ಳುತ್ತಿದ್ದರು ಎಂದರು.
ಸಮೃದ್ಧ, ಸುರಕ್ಷಿತ, ಸನ್ಮಾನಿತ ಹಾಗೂ ಸ್ವಾಸ್ಥ್ಯ ಹಿಂದೂ ನನ್ನ ಸಂಕಲ್ಪ. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ಕಾರ್ಯ ನಿರ್ವಹಿಸುತ್ತಿದೆ. ದೌರ್ಜನ್ಯ ಸೇರಿದಂತೆ ಯಾವುದೇ ಸಮಸ್ಯೆಗೆ ಸಿಲುಕುವ ಹಿಂದುಗಳಿಗಾಗಿ, ದೇಶದಾದ್ಯಂತ ಸಹಾಯವಾಣಿ ಆರಂಭಿಸಲಾಗಿದೆ. ಆನ್ಲೈನ್ ಮೂಲಕವೂ ಸಮಸ್ಯೆ ಹೇಳಿಕೊಳ್ಳಬಹುದು. ಕಾನೂನು ನೆರವಿಗೆ ಅಡ್ವೋಕೇಟ್ ಹೆಲ್ಪ್ಲೈನ್ ಸಹ ಆರಂಭಿಸಲಾಗಿದೆ. ಸ್ವಾಸ್ಥ್ಯ ಹಿಂದೂಗಾಗಿ, 10 ಸಾವಿರ ಖಾಸಗಿ ಹಿಂದೂ ವೈದ್ಯರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉದ್ಯಮಿ, ವಿಆರ್ಎಲ್ ಸಂಸ್ಥೆ ಚೇರ್ಮನ್ ವಿಜಯ ಸಂಕೇಶ್ವರ ಅಂತರರಾಷ್ಟ್ರೀಯ ಹಿಂದೂ ಪರಿಷತ್ತಿನ ರಾಜ್ಯ ಕಾರ್ಯಾಧ್ಯಕ್ಷ ರಮೇಶ್ ಕುಲಕರ್ಣಿ, ಮುಖಂಡರಾದ ಗಣು ಜರತಾರಘರ, ಮೋಹನ್ ಬಿಲಾನಾ, ಅರ್ಜುನ್, ಸುರೇಶ ಜೈನ್ ಸೇರಿದಂತೆ ವಿಶ್ವ ಹಿಂದೂ ಪರಿಷತ್ನ ಸ್ಥಳೀಯ ಮುಖಂಡರು, ಕಾರ್ಯಕರ್ತರು ಇದ್ದರು.