ಹುಬ್ಬಳ್ಳಿ-ಧಾರವಾಡ ಸುದ್ದಿ

ಡಾ.ನ.ವಜ್ರಕುಮಾರ ಇನ್ನು ನೆನಪು ಮಾತ್ರ

ಧಾರವಾಡ: ಇಲ್ಲಿನ ಪ್ರತಿಷ್ಠಿತ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ, ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಾ.ನ.ವಜ್ರಕುಮಾರ ಅವರು ಇಂದು ಮುಂಜಾನೆ ನಿಧನರಾದರು.


ಕೊಕ್ಕರ್ಣೆ ಅರಮನೆಯ ಭೋಜರಾಜಯ್ಯ ಹಾಗೂ ಕುತ್ಯಾರು ಅರಮನೆಗೆ ಸೇರಿದ ಚಂದ್ರಮತಿ ಅಮ್ಮನವರ ದ್ವಿತೀಯ ಪುತ್ರರಾಗಿ ಮೇ ೨೯,೧೯೩೯ರಂದು ಉಡುಪಿ ಜಿಲ್ಲೆಯ ನಂದಿಕೂರನಲ್ಲಿ ಅವರು ಜನಿಸಿದರು.


ಉನ್ನತ ಶಿಕ್ಷಣ ಅರ್ಥಶಾಸ್ತ್ರದಲ್ಲಿ ಎಂಎ ಮುಗಿಸಿದ ಇವರು ಎಂಜಿಎಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ವೃತ್ತಿಜೀವನವನ್ನು ಆರಂಭಿಸಿದರು.೧೯೭೪ ರಲ್ಲಿ ಮೂಡಬಿದ್ರಿಯ ಸುಮನರೊಂದಿಗೆ ವಿವಾಹವಾದರು. ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ, ಡಾ. ವೀರೇಂದ್ರ ಹೆಗ್ಗಡೆಯವರು 1973 ರಲ್ಲಿ ಧಾರವಾಡದ ಜನತಾ ಶಿಕ್ಷಣ ಸಮಿತಿ ಸಂಸ್ಥೆಯನ್ನು ವಹಿಸಿಕೊಂಡ ಬಳಿಕ ಡಾ.ನ.ವಜ್ರಕುಮಾರ ಅವರು ತಮ್ಮ ಕ್ರಿಯಾಶೀಲತೆ ಹಾಗೂ ಕಾರ್ಯದಕ್ಷತೆ ಗಳಿಂದ ಜೆಎಸ್‌ಎಸ್ ಸಂಸ್ಥೆಯ ಕಾರ್ಯದರ್ಶಿಗಳಾಗಿ ಎಂಜಿನಿಯರಿಂಗ್, ದಂತ ಮಹಾವಿದ್ಯಾಲಯ, ವೈದ್ಯಕೀಯ ಸಂಸ್ಥೆಗಳನ್ನು ಸ್ಥಾಪಿಸಲು ಕಾರಣೀಭೂತರಾಗಿದ್ದಾರೆ.


ಅವಿರತ ಶ್ರಮದಿಂದ ಶಿಕ್ಷಣಕ್ಷೇತ್ರದಲ್ಲಿ ಕ್ರಾಂತಿಯನ್ನುಂಟು ಮಾಡಿ ಧಾರವಾಡ ದಲ್ಲಿ ಶಿಕ್ಷಣ ಕ್ಷೇತ್ರವನ್ನು ವಿಸ್ತರಿಸಿದ ಕೀರ್ತಿಯ ಜೊತೆಗೆ ಸಾವಿರಾರು ಕುಟುಂಬಗಳಿಗೆ ಉದ್ಯೋಗ ಹಾಗೂ ಲಕ್ಷಾಂತರ ವಿದ್ಯಾರ್ಥಿಗಳಿಗೆ ಶಿಕ್ಷಣದಾತ ರಾಗಿ ಅಜಾತಶತ್ರು ಗಳೆನಿಸಿಕೊಂಡಿದ್ದರು.


ಅವರು ಜೈನ ಸಮಾಜದ ಹಿರಿಯರು ಮಾರ್ಗದರ್ಶಕರೂ ಆಗಿ ಧಾರವಾಡ ಜೈನ್ ಮಿಲನ್, ಧಾರವಾಡ ಇದರ ಮಹಾಪೋಷಕರು, ಸ್ಥಾಪಕರೂ ಆಗಿ ಹಲವಾರು ಧಾರ್ಮಿಕ ಕಾರ್ಯಗಳನ್ನು ಕೈಗೊಂಡು ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ.


ಅಂತಿಮ ದರ್ಶನ: ಸಾರ್ವಜನಿಕರಿಗೆ ಅಂತಿಮದರ್ಶನಕ್ಕಾಗಿ ಇಂದು ಮುಂಜಾನೆ 8 ರಿಂದ 9.30 ತನಕ ಜೆಎಸ್‌ಎಸ್ ಸಂಸ್ಥೆಯ ಬನಶಂಕರಿ ಕಾಲೇಜು ಆವರಣದಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಅನೇಕ ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು.

ಸಂತಾಪ

ಡಾ.ವಜ್ರಕುಮಾರ ನಿಧನಕ್ಕೆ ಶಾಸಕರಾದ ಅರವಿಂದ ಬೆಲ್ಲದ, ಅಮೃತ ದೇಸಾಯಿ, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಮಾಜಿ ಶಾಸಕರಾದ ಸೀಮಾ ಮಸೂತಿ, ಜಿ.ಎಸ್.ಪಾಟೀಲ, ಕಾಂಗ್ರೆಸ್ ಮುಖಂಡ ಆರ್.ಕೆ.ಪಾಟೀಲ, ಮೇಯರ್ ಈರೇಶ ಅಂಚಟಗೇರಿ, ಸದಾನಂದ ಡಂಗನವರ, ಶಾಸಕ ಶ್ರೀನಿವಾಸ ಮಾನೆ, ಮಾಜಿ ಸಚಿವರಾದ ವಿನಯ ಕುಲಕರ್ಣಿ, ಸಂತೋಷ ಲಾಡ್, ಎಐಸಿಸಿ ಸದಸ್ಯ ದೀಪಕ ಚಿಂಚೋರೆ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್. ನೀರಲಕೇರಿ, ಮಾಜಿ ಮೇಯರ ಶಿವು ಹಿರೇಮಠ ಮತ್ತಿತರರು ತೀವ್ರ ಶೋಕ ವ್ಯಕ್ತಪಡಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

 

administrator

Related Articles

Leave a Reply

Your email address will not be published. Required fields are marked *