ಹುಬ್ಬಳ್ಳಿ-ಧಾರವಾಡ ಸುದ್ದಿ

ಗಲಭೆ: ಮಾಸ್ಟರ್‌ಮೈಂಡ್ ಪೊಲೀಸ್ ವಶಕ್ಕೆ ಹಳೇಹುಬ್ಬಳ್ಳಿ ಗಲಾಟೆ: ಬಂಧಿತರ ಸಂಖ್ಯೆ 127 ಕ್ಕೆ

ಹಳೇಹುಬ್ಬಳ್ಳಿ ಗಲಾಟೆ: ಬಂಧಿತರ ಸಂಖ್ಯೆ 127ಕ್ಕೆ

ಹುಬ್ಬಳ್ಳಿ: ಕಳೆದ ಶನಿವಾರ ಇಲ್ಲಿನ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಹಾಗೂ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಡಿದ್ದ ಪ್ರಮುಖ ಆರೋಪಿ ಎನ್ನಲಾದ ಎಐಎಂಐಎಂ ಮುಖಂಡ ಮಹಮ್ಮದ್ ಆರಿಫ್‌ನನ್ನು ಇದೀಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಕರಣದ ಮಾಸ್ಟರ್ ಮೈಂಡ್ ಕೂಡ ಎನ್ನಲಾಗುತ್ತಿರುವ ಎಐಎಂಐಎಂ ಮುಖಂಡ ಮಹಮ್ಮದ್ ಆರಿಫ್ ಗಲಭೆ ನಡೆದ ದಿನ ಘಟನಾ ಸ್ಥಳದಲ್ಲಿದ್ದು, ಮೌಲ್ವಿ ವಾಸಿಂ ಪಠಾಣ್ ಹಾಗೂ ಪೊಲೀಸ್ ಇನ್‌ಸ್ಪೆಕ್ಟರ್ ಮತ್ತು ಪೊಲೀಸರ ಜೊತೆ ವಾಗ್ವಾದ ನಡೆಸಿದ್ದ ಎನ್ನಲಾಗಿದೆ.
ಗಲಭೆಯ ನಂತರ ನಗರದ ಮಂಟೂರ ರಸ್ತೆ ಮಿಲ್ಲತ್ ನಗರದ ಲಾರಿ ಚಾಲಕ, ಮೌಲ್ವಿ ವೇಷಧಾರಿ ಮಹಮ್ಮದ್ ಆರಿಫ್ ತಲೆಮರೆಸಿಕೊಂಡು ಹೈದರಾಬಾದ್‌ನಲ್ಲಿ ಅವಿತುಕೊಂಡಿದ್ದಾನೆಂಬ ಮಾಹಿತಿ ಆಧರಿಸಿ ತೀವ್ರ ಹುಡಕಾಟ ನಡೆಸಿ ಅಲ್ಲಿಗೆ ತೆರಳಿದ ಪೊಲೀಸರು ಕೊನೆಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಆದರೆ, ಈ ಪ್ರಕರಣದಲ್ಲಿ ಪ್ರಮುಖ ಮತ್ತೊಬ್ಬ ಆರೋಪಿಯಾಗಿರುವಂತ ವಾಸೀಂ ಎಂಬಾತ ಇನ್ನೂ ನಾಪತ್ತೆಯಾಗಿದ್ದು, ಪತ್ತೆ ಹಚ್ಚುವ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ.
ಗಲಭೆಗೆ ಪ್ರಚೋದನೆ ಹಾಗೂ ಭಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಇದುವರೆಗೆ ಒಟ್ಟು 127  ಜನರನ್ನು ವಶಕ್ಕೆ ತೆಗೆದುಕೊಂಡಿದ್ದು, ಇನ್ನೂ ಹಲವರನ್ನು ವಶಕ್ಕೆ ಪಡೆಯುವ ಕೆಲಸವನ್ನು ಮುಂದುವರೆಸಿದ್ದಾರೆ.
ನಗರ ಮಾತ್ರವಲ್ಲದೇ ಇಡೀ ರಾಜ್ಯವನ್ನೇ ತಲ್ಲಣಗೊಳಿಸಿದ್ದ ಈ ಘಟನೆಯಲ್ಲಿ ಭಾಗಿಯಾದ ಎಲ್ಲರನ್ನು ಬಂಧಿಸಿ ಕಂಬಿಯ ಹಿಂದೆ ಕಳಿಸಲು ಖಾಕಿ ಪಡೆ ಮಗ್ನವಾಗಿದೆ. ಈಗಾಗಲೇ ಹಲವರು ನಗರದಿಂದ ಕಾಲ್ಕಿತ್ತಿದ್ದು, ಅವರನ್ನು ಕೂಡ ಬಂಧಿಸುವ ನಿಟ್ಟಿನಲ್ಲಿ ಕಮೀಶ್ನರೇಟ್ ಪೊಲೀಸರು ಮುಂದಾಗಿದ್ದಾರೆ.

ಶೀಘ್ರ ಪೊಲೀಸರಿಗೆ ಶರಣು
ರಹಸ್ಯ ಸ್ಥಳದಿಂದ ವಾಸೀಂ ವಿಡಿಯೋ ರವಾನೆ


ಹುಬ್ಬಳ್ಳಿ: ಇಲ್ಲಿನ ಹಳೇ ಹುಬ್ಬಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾದ ಮೌಲ್ವಿ. ವಾಸೀಂ ಪಠಾಣ ರಹಸ್ಯ ಸ್ಥಳದಲ್ಲಿ ಕುಳಿತು ವೀಡಿಯೋ ಹರಿಬಿಟ್ಟಿದ್ದು, ಆದಷ್ಟು ಶೀಘ್ರ ಪೊಲೀಸರಿಗೆ ಶರಣಾಗುವುದಾಗಿ ಹೇಳಿದ್ದಾನೆ.
’ಗಲಭೆಗೆ ನಾನು ಪ್ರಚೋದನೆ ನೀಡಿಲ್ಲ. ಗಲಭೆಕೋರರನ್ನು ಸಮಾಧಾನ ಮಾಡುವ ಕೆಲಸ ಮಾಡುತ್ತಿದ್ದೆ. ಪ್ರತಿಭಟನೆ ಸಂದರ್ಭ ಕರೆಂಟ್ ಹೋಯ್ತು. ಕೆಲ ಜನ ಮುಖಕ್ಕೆ ಮಾಸ್ಕ್ ಹಾಕಿಕೊಂಡವರನ್ನು ನಾನು ನೋಡಿದ್ದೆ’ ಎಂದು ವಿಡಿಯೋ ಮೂಲಕ ಹೇಳಿದ್ದಾನೆ.
’ಉದ್ರಿಕ್ತರನ್ನು ಶಾಂತಿಯಿಂದ ಕೂಡುವಂತೆ ತಿಳಿ ಹೇಳುತ್ತಿದ್ದೆ. ಪೊಲೀಸರೇ ನನ್ನನ್ನು ವಾಹನದ ಮೇಲೆ ಹತ್ತುವಂತೆ ಸೂಚಿದರು. ನಾನು ಪ್ರಚೋದನಾತ್ಮಕ ಭಾಷಣ ಮಾಡಿಲ್ಲ’ ಎಂದು ಮೌಲ್ವಿ ತಿಳಿಸಿದ್ದಾನೆ.

 

ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಿಂದ ಪರಿಶೀಲನೆ


ಹುಬ್ಬಳ್ಳಿ: ಹುಬ್ಬಳ್ಳಿಯ ಜನರು ಶಾಂತಿ ಸೌಹಾರ್ದತೆಯಿಂದ ಬಾಳಬೇಕು. ಶಾಂತಿ ಸೌಹಾರ್ದತೆಯನ್ನು ಕಾಪಾಡುವುದು ಆಯೋಗದ ದೊಡ್ಡ ಜವಾಬ್ದಾರಿಯಾಗಿದೆ. ಯಾವುದೇ ಕಾರಣಕ್ಕೂ ರಾಜ್ಯ ಹಾಗೂ ದೇಶದಲ್ಲಿ ಸೌಹಾರ್ದತೆಗೆ ಧಕ್ಕೆ ಉಂಟಾಗಬಾರದು ಎಂದು ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಅಬ್ದುಲ್ ಅಜೀಮ್ ಹೇಳಿದರು.
ಹಳೇಹುಬ್ಬಳ್ಳಿಯಲ್ಲಿ ಇತ್ತೀಚೆಗೆ ಪೊಲೀಸ್ ಠಾಣೆ, ಆಸ್ಪತ್ರೆ, ಪ್ರಾರ್ಥನಾ ಮಂದಿರಗಳಿಗೆ ಭೇಟಿ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡಿ ದರು.
ಭಾರತೀಯರೆಲ್ಲರೂ ಒಂದೇ ತಾಯಿ ಮಕ್ಕಳು. ಶಾಂತಿ ಸೌಹಾರ್ದತೆ ಮೂಲಕ ದೇಶ ಹಾಗೂ ರಾಜ್ಯ ಅಭಿವೃದ್ಧಿ ಕಾಣಲು ಸಾಧ್ಯ. ಪೊಲೀಸ್ ಅಧಿಕಾರಿಗಳು ಹಾಗೂ ಇಲ್ಲಿನ ಜನರ ಜೊತೆ ಸಭೆ ನಡೆಸಿ ಶಾಂತಿ ಕಾಪಾಡಲು ಮುಂದಿನ ಕ್ರಮ ಕೈಗೊಳ್ಳಲು ಸೂಚಿಸಲಾಗುವುದು ಎಂದರು.

ಹುಬ್ಬಳ್ಳಿಯಲ್ಲಿ ಇಂತಹ ಘಟನೆಗಳು ಮರುಕಳಿಸಬಾರದು. ದಕ್ಷ ಪೊಲೀಸ್ ಅಧಿಕಾರಿಗಳು ಸಮರ್ಥವಾಗಿ ಕಾನೂನು ರೀತಿಯಲ್ಲಿ ತನಿಖೆ ಮಾಡುತ್ತಿ ದ್ದಾರೆ. ಘಟನೆಗೆ ಕಾರಣರಾದವರಿಗೆ ಶಿಕ್ಷೆಯಾಗಬೇಕು. ಪೊಲೀಸರು ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ಮೇಲೆ ಸಂಪೂರ್ಣ ನಂಬಿಕೆಯಿದೆ. ಹುಬ್ಬಳ್ಳಿ ನಗರದಲ್ಲಿ ಶಾಂತಿಯ ವಾತಾವರಣವಿರಲು ಪೊಲೀಸರು ಕಾರಣರಾಗಿದ್ದಾರೆ ಎಂದರು.
ದಿಡ್ಡಿ ಓಣಿಯ ಹನುಮಂತ ದೇವಸ್ಥಾನಕ್ಕೆ ಭೇಟಿ ನೀಡಿ, ಅರ್ಚಕರಾದ ಪ್ರಕಾಶ ಬಾದ್ರಿ ಹಾಗೂ ಟ್ರಸ್ಟ್ ಕಮೀಟಿಯ ಮಂಜುನಾಥ ಶಿರೂರ ಅವರಿಂದ ಮಾಹಿತಿ ಪಡೆದರು.ಹಿಂದೂ ಮುಸ್ಲಿಂ ಎಲ್ಲರೂ ಒಂದೇ. ಪೊಲೀಸರು ನಿಮಗೆ ರಕ್ಷಣೆ ನೀಡುತ್ತಾರೆ. ನಾವು ಇದ್ದೇವೆ. ಯಾವುದೇ ಕಾರಣಕ್ಕೂ ಹೆದರಬೇಡಿ. ಹಿಂದೂ ಮುಸ್ಲಿಂ ಎಂಬ ಭೇದಭಾವ ಮಾಡದೇ ಎಲ್ಲರೂ ಸೌಹಾರ್ದತೆ ಯಿಂದ ಇರೋಣ ಎಂದು ಭರವಸೆ ನೀಡಿದರು.
ಬಳಿಕ ಸಂಜೀವಿನಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ, ಡಾ.ರವೀಂದ್ರ ಗುರವ ಅವರಿಂದ ಆಸ್ಪತ್ರೆಗೆ ಹಾನಿ ಆಗಿರುವ ಬಗ್ಗೆ ಮಾಹಿತಿ ಪಡೆದರು.
ಪಾಲಿಕೆ ಆಯುಕ್ತ ಡಾ.ಬಿ.ಗೋಪಾಲಕೃಷ್ಣ, ಡಿಸಿಪಿ ಸಾಹಿಲ್ ಬಾಗ್ಲಾ, ಸಮಾಜ ಕಲ್ಯಾಣ ಜಂಟಿ ನಿರ್ದೇಶಕ ಕಲ್ಯಾಣ ಅಧಿಕಾರಿ ಡಾ.ಎನ್.ಆರ್ .ಪುರುಷೋತ್ತಮ, ಆಯೋಗದ ಕಾರ್ಯದರ್ಶಿ ಮೊಹಮ್ಮದ ನಜೀರ್, ಮುಖಂಡರಾದ ಡಾ.ಎನ್.ಎಫ್. ಮೋಹಸಿನ್, ಬುರಬುರಿ ಇತರರು ಇದ್ದರು.
administrator

Related Articles

Leave a Reply

Your email address will not be published. Required fields are marked *