ಹುಬ್ಬಳ್ಳಿ-ಧಾರವಾಡ ಸುದ್ದಿ

ದುಬೈ: ಹಿರಿಯರ ಕ್ರೀಡಾಕೂಟಕ್ಕೆ ಹೊರಟ ಕ್ರೀಡಾಪಟು ಸಲಕಿಗೆ ಸಹಾಯ ಮಾಡಿ

ಧಾರವಾಡ: ಅಂತರರಾಷ್ಟ್ರೀಯ ಕ್ರೀಡಾಪಟು ಮತ್ತು ಹಿರಿಯ ನಾಗರಿಕ ಎಸ್.ಎಂ.ಸಲಕಿ ಅವರು ಇದೇ ಜು.31 ರಿಂದ ಆ.6 ವರೆಗೆ ದುಬೈನಲ್ಲಿ ಜರುಗಲಿರುವ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಕ್ರೀಡಾಪ್ರೇಮಿ ಈಶ್ವರ ಶಿವಳ್ಳಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.


ಧಾರವಾಡ ತಾಲೂಕಿನ ಮರೇವಾಡ ಗ್ರಾಮದವರಾದ ಕ್ರೀಡಾಪಟು ಶಿವಪ್ಪ ಸಲಕಿ ಅವರು, ಭಾರತದ ಮಧ್ಯಪ್ರದೇಶದ ಸಂಯುಕ್ತ ಭಾರತೀಯ ಖೇಲ್ ಫೌಂಡೇಶನ್ ಆಯೋಜಿಸಿರುವ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದಾರೆ. ಶಿವಪ್ಪ ಅವರು 75 ಕ್ಕೂ ವರ್ಷ ಮೇಲ್ಪಟ್ಟ ನಾಗರಿಕರ ಕ್ರೀಡಾಕೂಟದಲ್ಲಿ 400 ಮೀ., 800 ಮೀ ಮತ್ತು 1500 ಮೀ. ಓಟದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.
ತಮ್ಮ 16ನೇ ವಯಸ್ಸಿನಲ್ಲಿ ಓಟದ ಗೀಳು ಹಚ್ಚಿಕೊಂಡ ಅವರು, ಇಂದಿನವರೆಗೂ ನಿತ್ಯ ಓಟ, ಯೋಗ ಮಾಡುವುದನ್ನು ಮುಂದುವರೆಸಿದ್ದಾರೆ. ಬೆಳಿಗ್ಗೆ 4 ಗಂಟೆಗೆ ಎದ್ದು 10 ಕಿ.ಮೀ. ಓಟವನ್ನು ಪೂರ್ಣಗೊಳಿಸುತ್ತಿದ್ದಾರೆ.
ರಾಜ್ಯಮಟ್ಟದ 26 ಕ್ಕೂ ಅಧಿಕ, ರಾಷ್ಟç ಮಟ್ಟದ 20 ವಿವಿಧ ಕ್ರೀಟಾಕೂಟಗಳಲ್ಲಿ ಭಾಗವಹಿಸಿದ್ದಾರೆ. ಮಲೇಶಿಯಾ, ನೇಪಾಳಗಳಲ್ಲಿ ಜರುಗಿದ ಹಿರಿಯ ನಾಗರಿಕರ ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಿಟ್ಟಿಸಿದ್ದು ಇವರ ಹಿರಿಮೆ. ಈ ಮೂಲಕ ಧಾರವಾಡ ತಾಲೂಕಿನ ಗೌರವವನ್ನು ಶಿವಪ್ಪ ಸಲಕಿ ಹೆಚ್ಚಿಸಿದ್ದಾರೆ.


ಎಸ್ಸೆಸ್ಸೆಲ್ಸಿವರೆಗೆ ಓದಿರುವ ಶಿವಪ್ಪ, ಕಳೆದ ಮೇ. 26 ರಿಂದ 28 ವರೆಗೆ ದೆಹಲಿಯಲ್ಲಿ ಜರುಗಿದ ಎಸ್.ಬಿ.ಕೆ.ಎಫ್. 8ನೇ ನ್ಯಾಶನಲ್ ಗೇಮ್ಸ್ನಲ್ಲಿ ಭಾಗವಹಿಸಿ 400 ಮೀ., 800 ಮೀ ಮತ್ತು 1500 ಮೀ. ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ. ದೇಶ-ವಿದೇಶಗಳಲ್ಲಿ ತಮ್ಮ ಸಾಧನೆ ಮೆರೆದಿರುವ ಇವರು ಇದೀಗ ದುಬೈನಲ್ಲಿ ಜರುಗಲಿರುವ ಹಿರಿಯ ನಾಗರಿಕರ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿದ್ದಾರೆ.
ರಾಜ್ಯ ಸಾರಿಗೆ ಸಂಸ್ಥೆಯಲ್ಲಿ ನಿರ್ವಾಹಕರಾಗಿ ಸೇವೆ ಸಲ್ಲಿಸಿ 2006ರಲ್ಲಿ ನಿವೃತ್ತರಾಗಿದ್ದಾರೆ. ತಮ್ಮ ಅಲ್ಪ ಮೊತ್ತದ ಪಿಂಚಣಿ ಹಣವನ್ನು ಸಹ ತಮ್ಮ ಓಟದ ಹವ್ಯಾಸಕ್ಕಾಗಿ ಉಪಯೋಗಿಸುತ್ತ ಬಂದಿದ್ದಾರೆ. ಅಲ್ಲದೇ ಗ್ರಾಮ ಪಂಚಾಯಿತಿ, ವಿವಿಧ- ಸಂಘ ಸಂಸ್ಥೆಗಳು ಆರ್ಥಿಕ ನೆರವು ಒದಗಿಸಿ ಪ್ರೋತ್ಸಾಹಿಸುತ್ತ ಬಂದಿವೆ. ಸರಕಾರ ಇಂತಹ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಕಲ್ಪಿಸುವ ಮುಖಾಂತರ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು. ಇದರಿಂದ ಮತ್ತಷ್ಟು ಯುವ ಸಮುದಾಯಕ್ಕೆ ಪ್ರೇರಣೆಯಾಗಲಿದೆ ಎಂದರು. ದುಬೈನಲ್ಲಿ ಜರುಗಲಿರುವ ಹಿರಿಯರ ಕ್ರೀಡಾಕೂಟಕ್ಕೆ ತೆರಳಲು ನಾಡಿನ ಪ್ರತಿಷ್ಠಿತ ವಿ.ಆರ್.ಎಲ್.ಸಮೂಹ ಸಂಸ್ಥೆ ಮತ್ತು ಹಲವು ಸಹೃದಯರು ಧನ ಸಹಾಯ ಮಾಡುತ್ತಿದ್ದಾರೆ. ವಿದೇಶದಲ್ಲಿನ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ಅಧಿಕ ಪ್ರಮಾಣದ ಖರ್ಚು ತಗಲುವುದರಿಂದ ಶಿವಪ್ಪ ಸಲಕಿಯಂತಹ ಹಿರಿಯ ಕ್ರೀಡಾಪಟುವಿಗೆ ನೆರವು ನೀಡಿ ಪ್ರೋತ್ಸಾಹಿಸಬೇಕು ಎಂದು ಮನವಿ ಮಾಡಿದರು.

ಆಸಕ್ತ ಕ್ರೀಡಾ ಪ್ರೇಮಿಗಳು ಶಿವಪ್ಪ ಮಹಾಂತಪ್ಪ ಸಲಕಿ. ಬ್ಯಾಂಕ್ ಖಾತೆ ಸಂ. 12572250022113 ಐಎಫ್‌ಎಸ್‌ಸಿ ನಂಬರ- ಸಿಎನ್‌ಆರ್‌ಬಿ 0011257. ಕೆನರಾ ಬ್ಯಾಂಕ್, ತಿಮ್ಮಾಪೂರ ಶಾಖೆ ಈ ಖಾತೆಗೆ ಸಂದಾಯ ಮಾಡಬಹುದು ಎಂದರು.

ಪರಮೇಶ್ವರ ಉಳವಣ್ಣವರ, ಬಸವರಾಜ ಚವಡಿಮನಿ, ಸುರೇಶ ತಡಕೋಡ, ಮುರಘೇಶ ಧನಶೆಟ್ಟಿ, ಅನಿತಾ ಮಟ್ಟಿ, ಕ್ರೀಡಾಪಟು ಶಿವಪ್ಪ ಸಲಕಿ ಗೋಷ್ಠಿಯಲ್ಲಿದ್ದರು.

administrator

Related Articles

Leave a Reply

Your email address will not be published. Required fields are marked *