ವಿನಯ ಕುಲಕರ್ಣಿ, ಪತ್ನಿ ಶಿವಲೀಲಾ ಭಾವುಕ
ಚನ್ನಮ್ಮನ ಕಿತ್ತೂರ : ತಾವು ಪ್ರತಿನಿಧಿಸುವ ಧಾರವಾಡ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಕುಂಠಿತ ಗೊಂಡಿಲ್ಲ ಎಂದು ಶಾಸಕ ವಿನಯ ಕುಲಕರ್ಣಿ ತಿಳಿಸಿದರು.
ಸಮೀಪದ ಡೊಂಬರಕೊಪ್ಪ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನ್ಯಾಯಾಲಯ ತಮ್ಮ ಜಾಮೀನು ರದ್ದುಗೊಳಿಸಿದ ಹಿನ್ನೆಲೆಯಲ್ಲಿ ತಾವು ಶುಕ್ರವಾರ ನ್ಯಾಯಾಲಯದ ನಿರ್ದೇಶನದಂತೆ ಹಾಜರಾಗುತ್ತೇನೆ. ತಮ್ಮ ಏಳ್ಗೆ ಸಹಿಸದವರಿಂದ ಪ್ರಕರಣದಲ್ಲಿ ತಾವು ತೊಂದರೆ ಅನುಭವಿಸುವಂತಾಗಿದೆ. ಆದರೆ, ಕ್ಷೇತ್ರದ ಜನರು ತಮ್ಮ ಅನುಪಸ್ಥಿತಿಯಲ್ಲಿ ಆಯ್ಕೆ ಮಾಡಿದ್ದಾರೆ.
ಇನ್ನೊಂದೆಡೆ ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಸಮಯಕ್ಕೆ ಸರಿಯಾಗಿ ಕೈಕೊಳ್ಳುವಂತೆ ನಿನ್ನೆ ಅಧಿಕಾರಿಗಳ ಸಭೆ ನಡೆಸಿ, ಸೂಚನೆ ಕೂಡ ನೀಡಿದ್ದೇನೆ. ನಮ್ಮ ಹೊಲ-ನಮ್ಮ ರಸ್ತೆ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತ ಅಧೀನದ ರಸ್ತೆಗಳ ನಿರ್ಮಾಣ ಕೆಲಸ ನಡೆಯುತ್ತಿದೆ.
ನೀರಾವರಿ ಇಲಾಖೆಯಿಂದ ತುಪ್ಪರಿ ಹಳ್ಳದ ನೂರಾರು ಕೋಟಿ ಕಾಮಗಾರಿ ನಡೆಯುತ್ತಿವೆ. ನಗರದಲ್ಲಿ 178 ಕೋ.ರೂ. ವೆಚ್ಚದಲ್ಲಿ ಒಳಚರಂಡಿ ನಿರ್ಮಾಣ ಕೈಕೊಳ್ಳಲಾಗುತ್ತಿದೆ. ಕ್ಷೇತ್ರದಲ್ಲಿ ಕೆರೆ ಅಭಿವೃದ್ಧಿ, ಶಾಲಾ ಕೊಠಡಿಗಳ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಮಳೆಯಿಂದ ಹಾನಿಯಾದರೂ ಜನರಿಗೆ ತೊಂದರೆ ಆಗದಂತೆ ನಿಗಾ ವಹಿಸಲಾಗುವುದು. ಕ್ಷೇತ್ರದ ರೈತರು, ಬಡವರು, ಕಾರ್ಮಿಕರು ಸೇರಿದಂತೆ ಯಾವುದೇ ವರ್ಗದ ಜನರಿಗೆ ತೊಂದರೆ ಆದರೆ ಸ್ಪಂದಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿರುವೆ. ಜೊತೆಗೆ ಪಕ್ಷದ ಮುಖಂಡರು ಜನರ ಸಮಸ್ಯೆಗಳ ನಿವಾರಣೆಗೆ ಶ್ರಮಿಸಲಿದ್ದಾರೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಪ್ರಮುಖರಾದ ಶಿವಲೀಲಾ ಕುಲಕರ್ಣಿ, ಜಿಲ್ಲಾ ಅಧ್ಯಕ್ಷ ಅನಿಲಕುಮಾರ ಪಾಟೀಲ, ತವನಪ್ಪ ಅಷ್ಟಗಿ, ಚನಬಸಪ್ಪ ಮಟ್ಟಿ, ಸಿದ್ದಪ್ಪ ಪ್ಯಾಟಿ, ಶಿವಾನಂದ ಮುತ್ತಣ್ಣವರ ಇತರರು ಸುದ್ದಿಗೋಷ್ಠಿಯಲ್ಲಿದ್ದರು.
ವಿನಯ ಕುಲಕರ್ಣಿ ಭಾವುಕ
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವರು ಆದ ವಿನಯ ಕುಲಕರ್ಣಿ, ಶುಕ್ರವಾರ ಬೆಂಗಳೂರಲ್ಲಿ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರಾಗುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಭಾವುಕರಾದ ಅವರು, ಮತ್ತೇ ಸುಧಾರಿಸಿಕೊಂಡು ಮಾತು ಮುಂದುವರಿಸಿದರು. ಪಕ್ಕದಲ್ಲಿದ್ದ ಪತ್ನಿ ಶಿವಲೀಲಾ ಅವರು ಕೂಡ ಭಾವುಕರಾದರು.