ಹುಬ್ಬಳ್ಳಿ-ಧಾರವಾಡ ಸುದ್ದಿ
ಕೊರೆವ ಚಳಿಯಲ್ಲಿ ಇಂಗ್ಲಿಷ್‌ ಕಾಲುವೆ ಈಜಿದ ಚನ್ನಣ್ಣವರ

ಕೊರೆವ ಚಳಿಯಲ್ಲಿ ಇಂಗ್ಲಿಷ್‌ ಕಾಲುವೆ ಈಜಿದ ಚನ್ನಣ್ಣವರ

ಸಾಧನೆಯ ಮಿನುಗುತಾರೆ ಮುರುಗೇಶ್

ಹುಬ್ಬಳ್ಳಿ: ಮೀನಿನಂತೆ ಈಜುವ ಮೂಲಕ ನಿರಂತರ ಸಾಧನೆ ಮಾಡುತ್ತಿರುವ ಇಲ್ಲಿನ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್ ಮುರುಗೇಶ್ ಚನ್ನಣ್ಣವರ, ಇದೀಗ ತಮ್ಮ ಮುಡಿಗೆ ಮತ್ತೊಂದು ಗರಿಯನ್ನು ಸೇರಿಸಿಕೊಂಡಿದ್ದಾರೆ.
43 ಕಿ.ಮೀ. ಉದ್ದದ ಇಂಗ್ಲಿಷ್‌ ಕಾಲುವೆಯನ್ನು 13 ಗಂಟೆ 37 ನಿಮಿಷಗಳಲ್ಲಿ ಈಜುವ ಮೂಲಕ ಮುರುಗೇಶ್ ಚನ್ನಣ್ಣವರ ಅವರನ್ನು ಒಳಗೊಂಡ 6 ಜನರ ಪ್ರೈಡ್‌ ಆಫ್‌ ಇಂಡಿಯಾ ತಂಡ ಮತ್ತೊಂದು ದಾಖಲೆ ನಿರ್ಮಿಸಿದೆ.


ಇಂಗ್ಲೆಂಡ್‌ನ ಸ್ಯಾಮ್‌ಥೈರ್‌ ಹೊಯ್‌ ದಡದಿಂದ ಆರಂಭವಾದ ಈ ಈಜು, ಫ್ರಾನ್ಸ್‌ನ ವಿಸ್ಸೆಂಟ್‌ ಬೀಚ್‌ನಲ್ಲಿ ಮುಕ್ತಾಯವಾಯಿತು. ತಂಡದಲ್ಲಿ ಮುರುಗೇಶ ಚನ್ನಣ್ಣವರ, ಇಲ್ಲಿನ ಕಿಮ್ಸ್‌ನ ಎಂಬಿಬಿಎಸ್‌ ವಿದ್ಯಾರ್ಥಿ ಅಮನ್‌ ಶಾನಭಾಗ, ಹರಿಯಾಣ ದ ಐಎಎಸ್‌ ಅಧಿಕಾರಿ ದೀಪಕ್ ಬಾಬುಲಾಲ ಕಾರವಾ, ವಿಕಲಾಂಗ ಈಜುಗಾರರಾದ ಗಣೇಶ್ ಬಾಲಾಜ, ರಾಜಬೀರ, ಮಹಾರಾಷ್ಟ್ರದ ಬಿಬಿಎ ವಿದ್ಯಾರ್ಥಿ ಮಾನವ ಮೊರೆ ಇದ್ದರು.


ಇಂಗ್ಲಿಷ್‌ ಚಾನೆಲ್‌ ಅಸೋಸಿಯೇಶನ್‌ ನಿಯಮದಂತೆ ಈ 6 ಈಜುಗಾರರು ಒಬ್ಬರ ನಂತರ ಒಬ್ಬರಂತೆ ಮೇಲ್ವಿಚಾರಕ ರಾಬ್‌ ಸ್ಮಿಥ್‌, ಪೈಲೆಟ್‌ ಸ್ಟುವರ್ಟ್‌ ಹಾಗೂ ಪ್ರಶಾಂತ್ ಕರ್ಮಾಕರ ನೇತೃತ್ವ ಹಾಗೂ ಮಾರ್ಗದರ್ಶನದಲ್ಲಿ ಈಜಿದರು.
13 ರಿಂದ 16 ಡಿಗ್ರಿ ಸೆಲ್ಸಿಯಸ್‌ನಂತರ ಚಳಿ, ಉಕ್ಕೇರುವ ಅಲೆಗಳ ನಡುವೆಯೂ 43 ಕಿ.ಮೀ.ದೂರವನ್ನು ಕೇವಲ 13.37 ಗಂಟೆಗಳಲ್ಲಿ ಈಜುವ ಮೂಲಕ ಗುರಿ ತಲುಪಿದ್ದಾರೆ.


ಪ್ರೈಡ್‌ ಆಫ್‌ ಇಂಡಿಯಾ ತಂಡವು ಜೂನ್‌ 16 ರಂದು ಬೆಳಗಿನ 2.15 ಕ್ಕೆ ಈಜು ಆರಂಭಿಸಿದ್ದು, ಮಧ್ಯಾಹ್ನ 3.52 ಕ್ಕೆ ಮುಕ್ತಾಯಗೊಳಿಸಿದೆ. ಈಜುವ ಸಂದರ್ಭದಲ್ಲಿ ಕೆಲವು ಜನರಿಗೆ ವಾಂತಿಭೇದಿ, ತಲೆ ಸುತ್ತುವದು, ಇತರೆ ಸಮಸ್ಯೆ ಕಾಡಿದ್ದರೂ ಛಲ ಬಿಡದ ತಂಡ, ಕೆಚ್ಚೆದೆಯಿಂದ ಈ ಅಭೂತಪೂರ್ವ ಸಾಧನೆ ಮಾಡುವ ಭಾರತದ ತ್ರಿವರ್ಣ ಧ್ವಜವನ್ನು ಎತ್ತಿ ಹಿಡಿದಿದೆ. ಪೊಲೀಸ್‌ ಅಧಿಕಾರಿ ಮುರುಗೇಶ್ ಚನ್ನಣ್ಣವರ, ಕರ್ನಾಟಕ ಪೊಲೀಸ್ ಧ್ವಜವನ್ನು ಇಂಗ್ಲೆಂಡಿನಲ್ಲಿ ಹಾರಿಸಿ ಇಲಾಖೆಯ ಕೀರ್ತಿಯನ್ನು ವಿದೇಶದಲ್ಲಿ ಹೆಚ್ಚಿಸಿದ್ದಾರೆ.

ಸಾಧಕ ಇನ್‌ಸ್ಪೆಕ್ಟರ್‌ ಚನ್ನಣ್ಣವರ

ಖಾಕಿ ಹಾಕಿದರೆ, ಕೇವಲ ದರ್ಪ, ಅಧಿಕಾರ ಚಲಾಯಿಸುವವರೇ ಹೆಚ್ಚು ಎನ್ನುವ ಭಾವನೆ ಬೇಡ. ನಾವೂ ಮನುಷ್ಯರು. ಸಾಧನೆಯ ಹಾದಿಯಲ್ಲಿ ಸಾಗಿದವರು ಎಂಬುದನ್ನು ಮೇಲಿಂದ ಮೇಲೆ ಸಾಬೀತು ಮಾಡುತ್ತಿದ್ದಾರೆ ಇನ್‌ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ.
ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್‌ಸ್ಪೆಕ್ಟರ್‌ ಆಗಿರುವ ಇವರು, ಈಜಿನಲ್ಲಿ ಸಾಧನೆಗಳ ಸುರಿಮಳೆಯನ್ನು ಗೈಯುತ್ತಿದ್ದಾರೆ.
ಎಂಬಿಬಿಎಸ್ ವಿದ್ಯಾರ್ಥಿ ಅಮನ್ ಶಾನಭಾಗ ಅವರೊಂದಿಗೆ ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿಯವರೆಗೆ ರಾಮ ಸೇತು ಮೂಲಕ 28 ಕಿ.ಮೀ. ಈಜನ್ನು ಚನ್ನಣ್ಣವರ 8 ಗಂಟೆ 30 ನಿಮಿಷ ಪೂರ್ಣಗೊಳಿಸಿದ್ದರು. ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು, ಪಶ್ಚಿಮ ಬಂಗಾಲ ಮತ್ತು ಹರಿಯಾಣದ ಅಂಗವಿಕಲ ಕ್ರೀಡಾಪಟುಗಳು ಈ ತಂಡದಲ್ಲಿ ಇದ್ದರು.


ಹಿಂದೂ ಮಹಾಸಾಗರ ಮತ್ತು ಬಂಗಾಲಕೊಲ್ಲಿಯ ಸಮುದ್ರಗಳು ಸೇರುವ ಕ್ಲಿಷ್ಟಕರವಾದ 28 ಕಿ.ಮೀ. ಈಜನ್ನು ಪ್ರತಿಕೂಲ ವಾತಾವರಣ ಮತ್ತು ಭಾರೀ ಅಲೆಗಳ ನಡುವೆ ನಿರಂತರವಾಗಿ 8 ಗಂಟೆ 30 ನಿಮಿಷ ಈಜುವ ಮೂಲಕ ಪೂರ್ಣಗೊಳಿಸಿತ್ತು.


ಇದಕ್ಕೆ ಸ್ಫೂರ್ತಿಯಾಗಿ ಮುರುಗೇಶ್‌ ಅವರ ಪತ್ನಿ ಶ್ವೇತಾ ಚನ್ನಣ್ಣವರ ಕೂಡ ಜೊತೆ ಬೋಟ್‌ನಲ್ಲಿ ಶ್ರೀಲಂಕಾಗೆ ಹೋಗಿದ್ದರು. ಈ ಮೂಲಕ ಐರನ್‌ಮ್ಯಾನ್ ಖ್ಯಾತಿಯ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್ ಮುಂತಾದ ಸಾಧನೆಗಳ ಮೂಲಕ ಪೊಲೀಸ್ ಇಲಾಖೆಯಲ್ಲಿ ಅಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲಿ ಮುರುಗೇಶ್‌ ಚನ್ನಣ್ಣವರ ಹೆಸರು ಮಾಡಿದ್ದಾರೆ

administrator

Related Articles

Leave a Reply

Your email address will not be published. Required fields are marked *