ಸಿಪಿಐ ಚನ್ನಕೇಶವ ಟಿಂಗರಿಕರ ಮನೆಗೆ ಸಿಬಿಐ ಅಧಿಕಾರಿಗಳು
ಹಿಂಬಾಗಿಲಿನಿಂದ ಕಾಲ್ಕಿತ್ತ ಪೊಲೀಸ್ ಅಧಿಕಾರಿ
ಧಾರವಾಡ: ಜಿ.ಪಂ.ಸದಸ್ಯನಾಗಿದ್ದ ಯೋಗೀಶಗೌಡ ಗೌಡರ ಕೊಲೆ ಪ್ರಕರಣದ ತನಿಖಾಧಿಕಾರಿ ಆಗಿದ್ದ ಪೊಲೀಸ್ ಅಧಿಕಾರಿ ಚೆನ್ನಕೇಶವ ಟಿಂಗರಿಕರ ಅವರ ಮನೆ ಮೇಲೆ ಬೆಳ್ಳಂ ಬೆಳಿಗ್ಗೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಪ್ರಕರಣದಲ್ಕಿ ಪಕ್ಷಪಾತ ನಡೆಸಿ ಕರ್ತವ್ಯಚ್ಯುತಿ ಎಸಗಿದ ಕಾರಣದಿಂದ ಟಿಂಗರೀಕರ ವಿರುದ್ಧವೂ ತನಿಖೆ ನಡೆದು ಆರೋಪ ಪಟ್ಟಿ ಸಲ್ಲಿಸಲಾಗಿತ್ತು. ಕಾರಣ ಚನ್ನಕೇಶವ ನಿರೀಕ್ಷಣಾ ಜಾಮೀನು ಪಡೆದಿದ್ದರು. ಆದರೆ ಟಿಂಗರೀಕರ ಅವರ ಜಾಮೀನು ಅವಧಿ ಮುಗಿದಿತ್ತು. ಪುನಾ ಹೈಕೋರ್ಟ್ ಮೊರೆ ಹೋಗಿದ್ದರು. ಆದರೆ, ಅವರ ಜಾಮೀನು ಬೇಡಿಕೆಯ ಅರ್ಜಿ ವಜಾಗೊಂಡಿತ್ತು. ಹೀಗಾಗಿ ಇಂದು ಬೆಳಿಗ್ಗೆ ಸಿಬಿಐ ಅಧಿಕಾರಿಗಳು ಬಂಧನ ಮಾಡಲು ಬೆಳಗಾವಿ ರಸ್ತೆಯ ಮಲಪ್ರಭಾ ನಗರದಲ್ಲಿರುವ ಚೆನ್ನಕೇಶವ ಅವರ ಮನೆಗೆ ಆಗಮಿಸಿದ್ದರು. ಆದರೆ, ಮನೆಯ ಹಿಂದಿನ ಬಾಗಿಲಿನಿಂದ ಚನ್ನಕೇಶವ ಕಾಲ್ಕಿತ್ತಿದ್ದಾರೆ.
ನಂತರ ಅಧಿಕಾರಿಗಳು ಟಿಂಗರೀಕರ ಅವರ ಮೊಬೈಲ್ನ ಜಾಡು ಹಿಡಿದು ಹುಡುಕಾಟ ಆರಂಭಿಸಿದ್ದಾರೆ. ಟಿಂಗರೀಕರ ಅವರು ಹುಬ್ಬಳ್ಳಿ-ಧಾರವಾಡ ಬೈಪಾಸ್ ಮೂಲಕ ತೆರಳಿರುವ ಶಂಕೆ ಇದ್ದು, ಅಧಿಕಾರಿಗಳು ಈ ನಿಟ್ಟಿನಲ್ಲಿ ತಡಕಾಡುತ್ತಿದ್ದಾರೆ. ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮೀಶ್ನರೇಟ್ನಲ್ಲಿ ಕಾರ್ಯ ನಿರ್ವಸುತ್ತಿದ್ದ ಸಿಪಿಐ ಚನ್ನಕೇಶವ ಟಿಂಗರೀಕರ ಇತ್ತೀಚಿಗಷ್ಟೇ ಬೆಳಗಾವಿಯ ಪೊಲೀಸ್ ಆಯುಕ್ತರ ಕಚೇರಿಗೆ ವರ್ಗಾವಣೆಯಾಗಿದ್ದರು.
ಯೋಗೀಶಗೌಡ ಕೊಲೆ ಪ್ರಕರಣದಲ್ಲಿ ತಪ್ಪು ಎಸಗಿದ ಭೀತಿಯಲ್ಲಿರುವ ಟಿಂಗರೀಕರ ಕಾಂಗ್ರೆಸ್ ಸರಕಾರ ಅಧಿಕಾರ ವಹಿಸಿಕೊಂಡ ಬಳಿಕ ಬೆಳಗಾವಿಗೆ ವರ್ಗಾವಣೆ ಮಾಡಿಸಿಕೊಂಡಿದ್ದರು. ಬೆಳಗಾವಿಯಲ್ಲಿ ಇದ್ದರೆ ಯೋಗೀಶಗೌಡ ಪ್ರಕರಣದಲ್ಲಿ ಬಚಾವ್ ಆಗುವ ದಿಸೆಯಲ್ಲಿ ಪ್ರಯತ್ನ ಮಾಡಬಹುದು ಎಂಬ ಲೆಕ್ಕಾಚಾರ ಇತ್ತು ಎನ್ನಲಾಗಿದೆ.
ಆದರೆ, ಜಾಮೀನು ಅರ್ಜಿ ವಜಾಗೊಂಡ ಕಾರಣ ಸಿಬಿಐ ಅಧಿಕಾರಿಗಳು ಈಗ ತನಿಖೆಗೆ ಮುಂದಾಗಿದ್ದಾರೆ. ಇತ್ತೀಚೆಗೆ ಸಾಕ್ಷಿನಾಶ ಆರೋಪದ ಪ್ರಕರಣದಲ್ಲಿ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದನ್ನು ನ್ಯಾಯಾಲಯ ವಜಾಗೊಳಿಸಿತ್ತು. ಇದರಿಂದ ಮಾಜಿ ಸಚಿವ ವಿನಯ ಕುಲಕರ್ಣಿ ಅವರಿಗೂ ಸಂಕಷ್ಟ ಎದುರಾಗಿದೆ. ಆದರೆ, ಇಂದು ಪೊಲೀಸ್ ಇಲಾಖೆ ಅಧಿಕಾರಿಯೊಬ್ಬರು ಕಳ್ಳರಂತೆ ಹಿಂಬಾಗಿಲಿನಿಂದ ಪರಾರಿಯಾಗಿರುವುದು ವಿಪರ್ಯಾಸವಾಗಿದೆ.