ಹುಬ್ಬಳ್ಳಿ-ಧಾರವಾಡ ಸುದ್ದಿ

ಕವಲಗೇರಿಯಲ್ಲಿ ಕೊನೆಗೂ ಚಿರತೆ ಸೆರೆ

ಧಾರವಾಡ: ನೃಪತುಂಗ ಬೆಟ್ಟದ ಸುತ್ತಮುತ್ತಲ ಪ್ರದೇಶ ಹಾಗೂ ಧಾರವಾಡದ ಕವಲಗೇರಿ ಸುತ್ತಮುತ್ತ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದ್ದ ಚಿರತೆ ಕೊನೆಗೂ ಸಿಕ್ಕಿ ಬಿದ್ದಿದೆ.


ಅರಣ್ಯ ಇಲಾಖೆ ಇಟ್ಟಿದ್ದ ಬೋನಿನಲ್ಲಿ ನಿನ್ನೆ ತಡರಾತ್ರಿ ಚಿರತೆ ಸಿಕ್ಕಿಬಿದ್ದಿದ್ದು, ಇಂದು ಬೆಳಿಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯನ್ನು ಸುರಕ್ಷಿತವಾಗಿ ವಶಕ್ಕೆ ಪಡೆದಿದ್ದಾರೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.
ಧಾರವಾಡ ತಾಲೂಕಿನ ಕವಲಗೇರಿ ಗ್ರಾಮ ವ್ಯಾಪ್ತಿಯ ಕಬ್ಬಿನ ಗದ್ದೆಗಳಲ್ಲಿ ಚಿರತೆ ವಾಸವಾಗಿತ್ತು. ಗ್ರಾಮದ ರೈತರು ಸಾಕಷ್ಟು ಪ್ರಮಾಣದಲ್ಲಿ ಕಬ್ಬು ಬೆಳೆದಿದ್ದು, ಅದು ಎತ್ತರವಾಗಿ, ದಟ್ಟವಾಗಿ ಬೆಳೆದಿದ್ದರಿಂದ ಚಿರತೆ ಅಡಗಿಕೊಳ್ಳಲು ಸಹಾಯಕವಾಗಿತ್ತು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.


ಅರಣ್ಯ ಇಲಾಖೆಯ ಡಿಸಿಎಫ್ ಯಶಪಾಲ್ ಕ್ಷೀರಸಾಗರ ನೇತೃತ್ವದಲ್ಲಿ ಸುಮಾರು ೬೦ ಕ್ಕೂ ಹೆಚ್ಚು ಅರಣ್ಯ ಇಲಾಖೆ ಸಿಬ್ಬಂದಿ, ಅಧಿಕಾರಿಗಳು ಚಿರತೆ ಕಾರ್ಯಾಚರಣೆಯನ್ನು ಕಳೆದ ೧೧ ದಿನಗಳಿಂದ ನಿರಂತರವಾಗಿ ಮಾಡುತ್ತಿದ್ದು ಕೊನೆಗೂ ಯಶಸ್ವಿಯಾಗಿದ್ದಾರೆ.
ನೃಪತುಂಗಬೆಟ್ಟದ ಸುತ್ತಮುತ್ತ ಕೂಂಬಿಂಗ್ ಕಾರ್ಯಾಚರಣೆ ಕೈಗೊಳ್ಳಲಾಗಿದ್ದರೂ, ಕವಲಗೇರಿ ಗ್ರಾಮದ ಕಬ್ಬಿನಗದ್ದೆಗಳ ಮಧ್ಯ ಹಾಗೂ ಸುತ್ತಲೂ ಸುಮಾರು ೬ ಕ್ಕೂ ಹೆಚ್ಚು ಬೋನಗಳನ್ನು ಮಾಂಸದೊಂದಿಗೆ ಇಟ್ಟಿದ್ದರು.ಬಹುಶಃ ನಿನ್ನೆ ತಡ ರಾತ್ರಿ ಅಥವಾ ಬೆಳಗಿನ ಜಾವ ಚಿರತೆ ಬೋನಿನಲ್ಲಿರುವ ಮಾಂಸ ತಿನ್ನಲು ಬಂದು ಸಿಕ್ಕಿ ಹಾಕಿ ಕೊಂಡಿದ್ದು, ಚಿರತೆ ಸುರಕ್ಷಿತವಾಗಿ ಸೆರೆ ಸಿಕ್ಕಿದೆ.

ಡಿಎನ್‌ಎ ವರದಿ ನಿರೀಕ್ಷೆಯಲ್ಲಿ

ಹುಬ್ಬಳ್ಳಿ ನೃಪತುಂಗಬೆಟ್ಟ ಹಾಗೂ ಕವಲಗೇರಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಸಿಕ್ಕಿರುವ ಚಿರತೆ ಮಲ(ಲದ್ದಿ)ವನ್ನು ಎರಡು ಒಂದೇ ಚಿರತೆಯದ್ದಾ ಅಥವಾ ಬೇರೆ ಬೇರೆ ಚಿರತೆಯದ್ದಾ ಎಂಬುವದನ್ನು ಗುರುತಿಸಲು ಡಿಎನ್‌ಎ ಪರೀಕ್ಷೆಗಾಗಿ ಈಗಾಗಲೇ ಹೈದ್ರಾಬಾದ್ ಪ್ರಯೋಗಾಲಯಕ್ಕೆ ಕಳಿಸಲಾಗಿದ್ದು, ಜಿಲ್ಲಾಡಳಿತ,ಅರಣ್ಯ ಇಲಾಖೆ ಈ ವರದಿ ಬರುವ ನಿರೀಕ್ಷೆಯಲ್ಲಿದೆ.
ಅಲ್ಲಿವರೆಗೂ ಸಾರ್ವಜನಿಕರು ಜಾಗೃತಿಯಿಂದ ಇದ್ದು, ಜಿಲ್ಲಾಡಳಿತ, ಅರಣ್ಯ ಇಲಾಖೆ, ಮಹಾನಗರಪಾಲಿಕೆ ನೀಡುವ ಸಲಹೆ,ಸೂಚನೆಗಳನ್ಬು ಪಾಲಿಸುವ ಮೂಲಕ ಚಿರತೆ ಕಾರ್ಯಾಚರಣೆಗೆ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿಗಳು ಮನವಿ ಮಾಡಿದ್ದಾರೆ.

ಕಾರ್ಯಾಚರಣೆ ಮುಂದುವರಿಕೆ

ಪ್ರಯೋಗಾಲಯದ ವರದಿ ಬರುವವರೆಗೆ ಹುಬ್ಬಳ್ಳಿ ನೃಪತುಂಗ ಬೆಟ್ಟದ ಸುತ್ತಲಿನ ಪ್ರದೇಶದಲ್ಲಿ ಚಿರತೆ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ಡಿಸಿ ತಿಳಿಸಿದ್ದಾರೆ.
ಮರಳಿ ಕಾಡಿಗೆ: ಕವಲಗೇರಿ ಗ್ರಾಮದ ಕಬ್ಬಿನಗದ್ದೆಯಲ್ಲಿ ಇಂದು ಬೆಳಿಗ್ಗೆ ಸೆರೆ ಹಿಡಿದಿರುವ ಚಿರತೆಯನ್ನು ಅರಣ್ಯ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿಗಳು ಇಂದು ರಾತ್ರಿ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಡುತ್ತಾರೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಅಭಿನಂದನೆ: ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿದ ಡಿಸಿಎಫ್ ಯಶಪಾಲ ನೇತೃತ್ವದ ಎಲ್ಲ ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿಗಳನ್ನು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅಭಿನಂದಿಸಿದ್ದಾರೆ.
ಕಂದಾಯ ಇಲಾಖೆ, ಗ್ರಾಮ ಪಂಚಾಯತ, ಆರೋಗ್ಯ ಇಲಾಖೆ ಸಹಕಾರ: ಚಿರತೆ ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆಯೊಂದಿಗೆ ಉಪವಿSu ಧಿಕಾರಿ ಡಾ.ಗೋಪಾಲಕೃಷ್ಣ ಬಿ., ತಹಸಿಲ್ದಾರ ಸಂತೋಷ ಬಿರಾದಾರ ನೇತೃತ್ವದಲ್ಲಿ ಕಂದಾಯ ಇಲಾಖೆ ಸಿಬ್ಬಂದಿ, ಜಿಲ್ಲಾ ಪಂಚಾಯತ ಸಿಇಓ ಡಾಸುಶೀಲಾ ಬಿ ಅವರ ಮಾರ್ಗದರ್ಶನದಲ್ಲಿ ಕನಕೂರ ಗ್ರಾಮ ಪಂಚಾಯತ ಸಿಬ್ಬಂದಿಗಳು ಕವಲಗೇರಿ ಹಾಗೂ ಸುತ್ತಲಿನ ಗ್ರಾಮಗಳಲ್ಲಿನ ಜನರಲ್ಲಿ ಚಿರತೆ ಕುರಿತು ಜಾಗೃತಿ, ಜನಪ್ರತಿನಿಧಿಗಳೊಂದಿಗೆ ಸಭೆ ಜರುಗಿಸಿ ಕಾರ್ಯಾಚರಣೆ ಯಶಸ್ವಿಗೊಳಿಸಲು ಸಹಕಾರ ಪಡೆದುದ್ದಾರೆ. ಮತ್ತು ಚಿರತೆ ಕಾರ್ಯಾಚರಣೆಗೆ ಅಗತ್ಯವಿರುವ ಸಹಾಯವನ್ಬು ನಿರಂತರವಾಗಿ ಮಾಡಿದ್ದಾರೆ. ವಿವಿಧ ಇಲಾಖೆಗಳ ಸಹಕಾರದಿಂದ ಚಿರತೆ ಕಾರ್ಯಾಚರಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ಕವಲಗೇರಿ ಗ್ರಾಮಸ್ಥರಿಗೂ ಕೃತಜ್ಞತೆ: ಚಿರತೆ ಕಾರ್ಯಾಚರಣೆ ಯಶ್ವಿಗೊಳಿ ಸಲು ಸಹಕರಿಸಿದ ಕವಲಗೇರಿ ಗ್ರಾಮಸ್ಥರಿಗೆ, ಅಲ್ಲಿನ ರೈತರಿಗೆ ಜಿಲ್ಲಾಧಿಕಾರಿ ಗಳು ಕೃತಜ್ಞತೆ ತಿಳಿಸಿದ್ದಾರೆ.

administrator

Related Articles

Leave a Reply

Your email address will not be published. Required fields are marked *