ಹುಬ್ಬಳ್ಳಿ-ಧಾರವಾಡ ಸುದ್ದಿ

ಸ್ವಾರ್ಥಕ್ಕಾಗಿ ಮಠದ ಘನತೆಗೆ ಧಕ್ಕೆ ತರುವ ಯತ್ನ

ಆಣೆ ಮಾಡಿ ಹೇಳುತ್ತೇವೆ – ಅವ್ಯವಹಾರ ನಡೆದಿಲ್ಲ

ಹುಬ್ಬಳ್ಳಿ : ಹುಬ್ಬಳ್ಳಿಯಲ್ಲಿ ನಡೆದಾಡಿದ ದೇವರಾಗಿರುವ ಶ್ರೀ ಸಿದ್ಧಾರೂಢರ ಮೇಲೆ ಪ್ರಮಾಣ ಮಾಡಿ ಹೇಳುತ್ತೇನೆ. ಮಠದಲ್ಲಿ ಯಾವುದೇ ಅವ್ಯವಹಾರಗಳು ನಡೆದಿಲ್ಲ. ಕೆಲವರು ತಮ್ಮ ವೈಯಕ್ತಿಕ ಹಿತಾಸಕ್ತಿಗಾಗಿ ಇಂತಹ ಆರೋಪ ಮಾಡುತ್ತಿದ್ದು ದಿ. ಏಳರಂದು ಸರ್ವಭಕ್ತರ ಸಭೆ ಕರೆದಿರುವುದಾಗಿ ಟ್ರಸ್ಟ್ ಕಮೀಟಿ ಚೇರಮನ್ ಬಸವರಾಜ ಕಲ್ಯಾಣಶೆಟ್ಟರ್ ಹೇಳಿದರು.
ಮಠದ ಹಣ ದುರ್ಬಳಕೆಯಾಗಿದೆ ಎಂದು ಕೆಲವರು ಆರೋಪ ಮಾಡಿರುವ ಹಿನ್ನೆಲೆಯಲ್ಲಿ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾವು ಭಕ್ತರ ಸಲಹೆ ಮತ್ತು ಪ್ರಶ್ನೆಗಳನ್ನು ಸ್ವೀಕರಿಸುತ್ತೇವೆ. ಎಲ್ಲದಕ್ಕೂ ಲಿಖಿತ ಉತ್ತರವನ್ನು ಕೊಡುತ್ತೇವೆ. ಪ್ರತಿಯೊಂದು ಖರ್ಚು ವೆಚ್ಚದ ಲೆಕ್ಕ ಪತ್ರಗಳು ನಮ್ಮ ಬಳಿ ಇವೆ ಎಂದರು.
ಶ್ರೀ ಸಿದ್ಧಾರೂಢಮಠದ ಘನತೆಗೆ ಕುಂದು ತರುವಂತಹ ಯತ್ನದಲ್ಲಿ ಭಾಗಿಯಾದ ಗುರುಶಾಂತಪ್ಪ ಕಾರಿ ಮತ್ತು ಗುರುಸಿದ್ದಪ್ಪ ಅಂಗಡಿ ಇವರುಗಳ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಲು ಟ್ರಸ್ಟ ಕಮೀಟಿಯಲ್ಲಿ ತೀರ್ಮಾನಿಸಲಾಗಿದೆ ಹೇಳಿದರು.


ದಿ. 3ರಂದು ದಾಸೋಹ ಹಾಲಿನಲ್ಲಿ ನಡೆದ ಶಿವರಾತ್ರಿ ಮಹೋತ್ಸವದಂಗವಾಗಿ ಕರೆದ ಪೋಷಕರು, ಆಶ್ರಯದಾತರು, ಅಜೀವ ಸದಸ್ಯರ ಸಭೆಯಲ್ಲಿ ಮಠದವರು ಅಡಿಟ್ ರಿಪೋರ್ಟ ನೀಡಿರುವುದಿಲ್ಲ ಅಲ್ಲದೇ ಜಮಾ ಖರ್ಚನ್ನು ನೀಡಿರುವುದಿಲ್ಲ ಎಂದು ಮಾಧ್ಯಮದವರ ಮುಂದೆ ಸುಳ್ಳು ಹೇಳಿಕೆ ನೀಡಿ ಮಠದ ಗೌರವಕ್ಕೆ ಧಕ್ಕೆ ತಂದಿದ್ದಾರಲ್ಲದೇ ಭಕ್ತಾಧಿಗಳನ್ನು ತಪ್ಪು ದಾರಿಗೆಳೆಯುವ ಯತ್ನ ಮಾಡಿದ್ದಾರೆಂದರು.
ಶ್ರೀ ಮಠದ ಆರೂಢ ತತ್ವ ಪ್ರಚಾರ ವೇದಿಕೆ ಎಂಬ ಸುಳ್ಳು ಸಂಸ್ಥೆ ಹುಟ್ಟು ಹಾಕಿದ ಕಾರಿ ಹಾಗೂ ಅಂಗಡಿಯವರ ತಂಡ ದಿ. ೩ರಂದು ಶ್ರೀಮತಿ ಲೀಲಾವತಿ ಪಾಸ್ತೆ ಅವರು ಅಭಿಪ್ರಾಯ ಮಂಡಿಸಲು ಬಂದ ಸಂದರ್ಭದಲ್ಲಿ ಮೈಕ್ ಕಸಿದುಕೊಂಡು ದಾಂಧಲೆ ನಡೆಸಿದ್ದಾರಲ್ಲದೇ ವೇದಿಕೆ ಸದಸ್ಯರು ಅತ್ಯಂತ ಅಸಭ್ಯವಾಗಿ ವರ್ತಿಸಿದ್ದಾರೆಂದರು.
ಅಂದು ಸಭೆಯಲ್ಲಿದ್ದ ಎಲ್ಲರಿಗೂ ಅಢಾವೆ ಪತ್ರಿಕೆಯನ್ನು ನೀಡಲಾಗಿತ್ತಲ್ಲದೇ ಅದನ್ನು ಅಲ್ಲಗಳೆದು ಅಡ್ಡಿಪಡಿಸಿ ಸಭೆಯಲ್ಲಿ ಆತಂಕದ ವಾತಾವರಣ ಹುಟ್ಟು ಹಾಕಲಾಗಿದೆ ಅಲ್ಲದೇ ಈ ಸದಸ್ಯರುಗಳು ಪದೇ ಪದೇ ಟ್ರಸ್ಟ್‌ಗೆ ಬ್ಲಾಕ್ ಮೇಲ್ ಮಾಡುತ್ತಿದ್ದಾರೆಂದರು.


ಗುರುಸಿದ್ದಪ್ಪ ಅಂಗಡಿ ಇವರು ಮಠದ ಮುಂಭಾಗದಲ್ಲಿ ಫಲಪುಷ್ಪ ಮಳಿಗೆಯನ್ನು ತಂದೆಯ ಹೆಸರಲ್ಲಿ ಬಾಡಿಗೆ ಪಡೆದು ಅವರ ಅವಧಿ ಮುಗಿದಿದ್ದರೂ ರಿನಿವಲ್ ಮಾಡಿಲ್ಲವಾಗಿದ್ದ ಅಲ್ಲದೇ ಬಾಡಿಗೆಯನ್ನು ಉಳಿಸಿಕೊಂಡಿದ್ದರು. ಕೊನೆಗೂ ಸಮಿತಿಯವರು ಒತ್ತಡಕ್ಕೆ ಮಣಿದು ಕೆಲವು ದಿನದ ಹಿಂದೆ ಬಾಡಿಗೆ ಪಾವತಿಸಿದ್ದಾರೆಂದರು.
ಅಂಗಡಿ ಮತ್ತು ಕಾರಿ ಇಬ್ಬರು ಕೆಲವರನ್ನು ಸೇರಿಸಿಕೊಂಡು ಮಠದ ಬೈಲಾ ಸರಿಯಿಲ್ಲ ೪-೫ ಬಾರಿ ಅರ್ಜಿ ಹಾಕಿದರೂ ನೇಮಕವಾಗಿಲ್ಲ ಎಂದು ಜಿಲ್ಲಾ ನ್ಯಾಯಾಧೀಶರ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದ್ದು, ಮೇಲ್ಮನೆಯ ಅಧ್ಯಕ್ಷರಾಗಿ ಡಿ.ಆರ್.ಪಾಟೀಲ, ಉಪಾಧ್ಯಕ್ಷರಾಗಿ ಬಾಗೇವಾಡಿ ಅವರನ್ನು ಆಯ್ಕೆ ಮಾಡಿದ್ದಕ್ಕೆ ಸಹ ಅಸಮಾಧಾನ ವ್ಯಕ ಪಡಿಸಿದ ಇವರು ಟ್ರಸ್ಟ್ ಕಮೀಟಿಗೆ ಬ್ಲಾಕ ಮೇಲ್ ಮಾಡುತ್ತಿದ್ದಾರೆಂದರಲ್ಲದೇ ಮಠದಲ್ಲಿ ಪ್ರತಿ ತಿಂಗಳ ಆಡಿಟ್ ಮಾಡಿಸಿ ಪ್ರತಿಯನ್ನು ಆಡಳಿತ ಮಂಡಳಿಯ ಸಭೆಯಲ್ಲಿ ಮಂಡಿಸಿ ಮುಖ್ಯ ಆಡಳಿತಾಧಿಕಾರಿಗಳಿಗೆ ನೀಡಲಾಗುವುದು ಎಂದರು.
ಗೋಷ್ಠಿಯಲ್ಲಿ ಕಾರ್ಯದರ್ಶಿ ಸರ್ವಮಂಗಳಾ ಪಾಠಕ್, ಟ್ರಸ್ಟಿಗಳಾದ ಬಾಳು ಮಗಜಿಕೊಂಡಿ, ಶ್ಯಾಮಾನಂದ ಪೂಜಾರಿ, ಗೀತಾ ಕಲಬುರ್ಗಿ, ಚನ್ನವೀರ ಮುಂಗರವಾಡಿ ಮುಂತಾದವರಿದ್ದರು.

administrator

Related Articles

Leave a Reply

Your email address will not be published. Required fields are marked *