ಹುಬ್ಬಳ್ಳಿ-ಧಾರವಾಡ ಸುದ್ದಿ

ಬಡವರಿಗೆ ನೆರವು ನೀಡಿದ ಉದಾರಿ ಅಪ್ಪಾಜಿ

ಕೊರೊನಾದಿಂದ ಸಂಕಷ್ಟಕ್ಕೀಡಾಗಿರುವವರ ಕಣ್ಣಿರೊರೆಸುತ್ತ,
ಜನಸೇವೆಯೇ ಜನಾರ್ಧನ ಸೇವೆ ಎಂದು ಅಕ್ಷರಶಃ ಕಾರ್ಯನಿರ್ವಹಿ ಸುತ್ತಿರುವ ನವನಗರದ ವಿಜಯಕುಮಾರ ಅಪ್ಪಾಜಿ ಸದ್ದಿಲ್ಲದ ಸಾಧಕ. ನಿಜವಾದ ಆಪತ್ಪಾಂಧವ. ಅವರ ಮೊಬೈಲ್ ಕಾಲರ್ ಟ್ಯೂನ್‌ನಲ್ಲಿರುವ ಅಮೃತಘಳಿಗೆ ಚಿತ್ರದ ’ಹಿಂದೂಸ್ತಾನವು ಎಂದೂ ಮೆರೆಯದ ರತ್ನವು ನೀನಾಗು, ಕನ್ನಡ ಹಿರಿಮೆಯ ಮಗನಾಗು’ ಎಂಬ ಹಾಡಿಗೆ ಅನ್ವರ್ಥವಾಗಿದ್ದಾರೆ.

 

ಹುಬ್ಬಳ್ಳಿ: ಮಹಾಮಾರಿ ಕೊರೊನಾ ೧ನೇ ಮತ್ತು ೨ನೇ ಅಲೆಯಿಂದ ಇಡೀ ಜಗತ್ತೆ ತತ್ತರಿಸಿದೆ. ಅದರ ನಿರ್ಮೂಲನೆಗೆ ಸರಕಾರ ಲಾಕ್‌ಡೌನ್ ಘೋಷಿಸಿದಾಗ ಸಂಕಷ್ಟಕ್ಕೆ ಸಿಲುಕುವವರು ದಿನಗೂಲಿಗಳು, ಸ್ಲಮ್ ನಿವಾಸಿಗಳು. ಒಂದು ದಿನ ದುಡಿಯದೇ ಹೋದಲ್ಲಿ ಮುಂದೇನು ಎಂಬ ಪ್ರಶ್ನೆ ಅವರಲ್ಲಿ ಮೂಡುವುದು ಸಹಜ. ಇಂಥ ಪ್ರಸಂಗದಲ್ಲಿ ಜನ ನೆರವು ಬಯಸುವುದು ಸಹಜ. ಇಂತಹ ಸಂದರ್ಭದಲ್ಲಿ ಕೆಲಸವಿಲ್ಲದೇ ಊಟಕ್ಕೇನು ಎಂಬ ಚಿಂತೆಯಲ್ಲಿದ್ದವರಿಗೆ ಯಾವುದೇ ಜಾತಿ, ಮತ ಭೇದ ಭಾವ ಮಾಡದೇ ನವನಗರದ ಸುತ್ತಮುತ್ತಲಿನ ಜನಕ್ಕೆ ಪಕ್ಷಾತೀತವಾಗಿ ಸಂಕಷ್ಟದಲ್ಲಿರುವ ಸಾರ್ವಜನಿಕರಿಗೆ ಸಹಾಯ ಹಸ್ತ ಚಾಚುತ್ತಿರುವವರು ಬಿಜೆಪಿ ಯುವ ನಾಯಕ ವಿಜಯಕುಮಾರ ಮಲ್ಲಿಕಾರ್ಜುನ ಅಪ್ಪಾಜಿ.
ಮೊದಲ ಹಾಗೂ ಎರಡನೇ ಅಲೆಯಲ್ಲಿ ಲಾಕ್‌ಡೌನ್ ಜಾರಿಯಾದ ಸಂದರ್ಭದಲ್ಲಿ ವಿಜಯಕುಮಾರ ಸಚಿವ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಶಾಸಕ ಅರವಿಂದ್ ಬೆಲ್ಲದ್ ಅವರ ಮಾರ್ಗದರ್ಶನದಲ್ಲಿ ತಮ್ಮ ತಂದೆ-ತಾಯಿಯ ಆರ್ಶೀವಾದದೊಂದಿಗೆ ಮಹಾಮಾರಿ ಕಂಗೆಟ್ಟಿರುವ ಅನೇಕ ಕೂಲಿ ಕಾರ್ಮಿಕರಿಗೆ, ಆಟೋ ಚಾಲಕರಿಗೆ, ದಿನಗೂಲಿ ನೌಕರರು ಸೇರಿದಂತೆ ಸಾವಿರಾರು ಬಡಕುಟುಂಬಗಳಿಗೆ ಲಕ್ಷಾಂತರ ರೂ ವೆಚ್ಚದಲ್ಲಿ ಆಹಾರ ದಿನಸಿ ಸಾಮಗ್ರಿಗಳನ್ನು ತಯಾರಿಸಿ ವಿತರಣೆ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಹೆಸರಿನಲ್ಲಿ ಏನಿದೆ? ಗುಲಾಬಿ ಹೂವಿಗೆ ಗುಲಾಬಿ ಎಂದು ಕರೆಯದೆ ಬೇರೆ ಹೆಸರಿನಿಂದ ಕರೆದರೆ ಅದು ಸುವಾಸನೆ ಬೀರುವುದೆ? ಹೆಸರಿನಲ್ಲಿ ಸಹ ಇಟ್ಟ ಹೆಸರು ಹಾಗೂ ಕರೆವ ಹೆಸರು ಎಂದು ಎರಡು ರೀತಿಗಳಿವೆ. ಕೆಲವರಿಗೆ ಅವರ ಶಾರೀರಿಕ ಕಾರಣದಿಂದ ಅವರ ಹೆಸರುಗಳನ್ನು ಕರೆಯುತ್ತಾರೆ. ಇನ್ನು ಕೆಲವರಿಗೆ ಅವರ ಹೆಸರಿಗೆ ಸರಿ ಹೊಂದುವಂತಹ ಹೆಸರುಗಳು ಇವೆ. ಇಂತವರ ಸಾಲಿನಲ್ಲಿ ವಿಜಯಕುಮಾರ ಬರುತ್ತಾರೆ ಇವರ ಹೆಸರಿನಲ್ಲಿ ವಿಜಯವೂ ಇದೆ ಅಲ್ಲದೇ ನೊಂದವರ ಬದುಕಿಗೆ ಆಸರೆಯಾಗಬಲ್ಲ ಅಪ್ಪಾಜಿ ಎಂಬ ಅಡ್ಡ ಹೆಸರೂ ಇದೆ.
ಸದಾ ಹಸನ್ಮುಖಿ ಆಗಿರುವ ವಿಜಯಕುಮಾರ ಕುಟುಂಬದವರು ಜನ ಸೇವೆಯೇ ಜನಾರ್ದನ ಸೇವೆ ಎಂದು ನಂಬಿದವರು. ನವನಗರ ಸುತ್ತಮುತ್ತಲಿನ ನೆರೆಹೊರೆಯ ಅಮರಗೋಳ, ನಂದಿಶ್ವರ ನಗರ, ಪಂಚಾಕ್ಷರಿ ನಗರ, ನಿಲಗುಂದ ಲೇಔಟ್, ಕೆಸಿಸಿ ಲೇಔಟ್, ಶಿವಾನಂದ ನಗರ, ಕೆಹೆಚ್ಬಿ ಕಾಲೋನಿ, ಪ್ರಜಾನಗರ, ಶಾಂತನಗರ, ಸುತಗಟ್ಟಿ ಸೇರಿದಂತೆ ಇನ್ನಿತರ ಕಡೆಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ ಜನರ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಎಲ್ಲ ವರ್ಗದ ಜನರಿಗೂ ಆಹಾರದ ಕಿಟ್ ವಿತರಣೆ ಮಾಡಿರುವ ಇವರು, ಕೊರೊನಾ ವಾರಿಯರ್ಸ್ಗಳಾದ ಪೊಲೀಸರಿಗೆ ಮಾಸ್ಕ್, ಸ್ಯಾನಿಟೈಜರ್, ಕೋವಿಡ್ ರೋಗಿಗಳಿಗೆ ಔಷಧಿ ಕಿಟ್ ವಿತರಿಸುತ್ತಿರುವ ಇವರು ಕೊರೊನಾ ಮುಂಜಾಗ್ರತಾ ಕ್ರಮಗಳ ಬಗ್ಗೆ ಜನತೆಗೆ ಜಾಗೃತಿ ಮೂಡಿಸಿದ್ದಾರೆ.

ಸಂಕಷ್ಟಕ್ಕೆ ಆಸರೆ
ಯಶಸ್ವಿ ಉದ್ಯಮಿಯೂ ಆಗಿರುವ ವಿಜಯಕುಮಾರ ಅವರು ಲಾಕ್ಡೌನ್ ಘೋಷಣೆಯಾದೊಡನೆ ಬಡವರ ಸಂಕಷ್ಟಕ್ಕೆ ಸ್ಪಂದಿಸಲು ಕಾರ್ಯೋನ್ಮುಖರಾಗಿ ತಮ್ಮ ತಾಯಿ ಸುಶೀಲಾ, ತಂದೆ ಮಲ್ಲಿಕಾರ್ಜುನ ಹಾಗೂ ಪತ್ನಿ ಶೋಭಾ ಅವರೊಂದಿಗೆ ಚರ್ಚಿಸಿ ಅವರ ಸಲಹೆ ಸೂಚನೆಗಳನ್ನು ಪಡೆದು ನವನಗರ ಸುತ್ತಮುತ್ತ ಯಾರೇ ಸಂಕಷ್ಟದಲ್ಲಿ ಸಿಲುಕಿದ್ದು ಗಮನಕ್ಕೆ ಬಂದರೂ ತಕ್ಷಣವೇ ಅವರ ಕಷ್ಟ ಪರಿಹಾರಕ್ಕೆ ಅತಿ ಮುತುವರ್ಜಿಯಿಂದ ಕೆಲಸ ಮಾಡಿದ್ದಾರೆ. ನಿರಂತರ ಜನರೊಂದಿಗೆ ಸಂಪರ್ಕದಲ್ಲಿದ್ದುಕೊಂಡು ತಮ್ಮ ಸುತ್ತಮುತ್ತಲಿನ ಎಲ್ಲ ಬಡಾವಣೆಗಳಲ್ಲಿನ ಜನರಿಗೆ ಆಹಾರದ ಕಿಟ್ ವಿತರಿಸಿ, ಬಡಜನರ, ನಿರಾಶ್ರಿತರ ಹಸಿವು ನೀಗಿಸುವ ಮೂಲಕ ಸಾರ್ಥಕ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ. ಪ್ರತಿ ಕಿಟ್ನಲ್ಲಿ ಕೆಜಿ ಅಕ್ಕಿ, ಕೆಜಿ ತೊಗರಿ ಬೆಳೆ, ಕೆಜಿ ಸಕ್ಕರೆ, ಕೆಜಿ ಗೋಧಿ ಹಿಟ್ಟು, ಚಹಾ ಪುಡಿ, ಅಡುಗೆ ಎಣ್ಣೆ ಒಳಗೊಂಡ ಸುಮಾರು ೧೧೦೦ ಕ್ಕೂ ಹೆಚ್ಚು ಆಹಾರ ಕಿಟ್ನ್ನು ವಿತರಣೆ ಮಾಡಿದ್ದಾರೆ.

ಸೋಂಕಿತರಿಗೆ ಸ್ಪಂದನೆ
ಸೋಂಕಿತರು ಎಂದಾಕ್ಷಣ ದೂರ ಸರಿಯುವ ಜನಗಳೇ ಹೆಚ್ಚಿರುವ ಸಂದರ್ಭದಲ್ಲಿ ವಿಜಯಕುಮಾರ ತಮ್ಮ ಸ್ನೇಹತರ ಸಹಕಾರದಿಂದ ಸಾಮಾಜಿಕ ಜಾಲತಾಣದಲ್ಲಿ ಸಹಾಯವಾಣಿ ನಂಬರ್ ಹಾಕಿ ಅದರಲ್ಲಿ ಬಂದ ಕರೆಗಳಿಗೆ ಸ್ಪಂದಿಸಿ ಈವರೆಗೆ ೩೦ ಕ್ಕೂ ಹೆಚ್ಚು ಕೋವಿಡ್ ಸೋಂಕಿತರಿಗೆ ಔಷಧಿ ಕಿಟ್‌ಗಳನ್ನು ಅವರ ಮನೆ ಬಾಗಿಲಿಗೇ ತಲುಪಿಸಿದ್ದಾರೆ. ಇದರಲ್ಲಿ ಕುಂದಗೋಳ ತಾಲೂಕಿನ ಅಧಿಕ ಸೋಂಕಿತರಿಗೆ ಸಹಾಯ ಹಸ್ತ ಚಾಚಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದಾರೆ.

ಜನಾನುರಾಗಿ
ವಿಜಯಕುಮಾರ ಅಪ್ಪಾಜಿ ಅವರು ತಮ್ಮ ಬಳಿ ನೆರವು
ಕೋರಿ ಬರುವ ಜನರಿಗೆ ಜಾತಿ, ಮತ ಭೇದ-ಭಾವ ಇಲ್ಲದೇ ಸಹಾಯ
ಮಾಡುವ ಮಾನವೀಯತೆ ತೋರುತ್ತಿದ್ದು, ವಿಧ್ಯಾಭ್ಯಾಸ, ಆರೋಗ್ಯ, ಮದುವೆ, ಬಡತನ ಸೇರಿದಂತೆ ಇನ್ನಿತರ ಕಾರಣಗಳಿಂದ
ಬರುವ ಜನರಿಗೆ ಸಹಾಯಹಸ್ತ ಚಾಚುವ ಮೂಲಕ ಯಾವುದೇ ಅಪೇಕ್ಷೆ ಇಲ್ಲದೇ ಕಾರ್ಯನಿರ್ವಹಿಸಿದ್ದಾರೆ.
ಕೋವಿಡ್ ಕಾರ್ಯಾಚರಣೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ಹಗಲಿರುಳು ಶ್ರಮಿಸುತ್ತಿರುವ ಪೊಲೀಸರು, ಆಶಾ ಕಾರ್ಯಕರ್ತೆಯರಿಗೂ ನೆರವಾಗಿದ್ದು, ನವನಗರ ಎಪಿಎಂಸಿ ಠಾಣೆಯ ಎಲ್ಲ ಸಿಬ್ಬಂದಿ ವರ್ಗಕ್ಕೆ ಮಾಸ್ಕ್ ಸ್ಯಾನಿಟೇಜನರ್ ವಿತರಿಸಿದ್ದಾರೆ.

ಸ್ವಂತವಾಹನವೇ ’ಆಪ್ತ ಮಿತ್ರ’
ನವನಗರದ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಲಾಕ್ ಡೌನ್ ಸಮಯದಲ್ಲಿ ತುರ್ತು ವೈದ್ಯಕೀಯ ಸೇವೆ ಪಡೆಯಲು ಯಾರಿಗಾದರೂ ವಾಹನದ ಸಮಸ್ಯೆ ಎದುರಾದರೆ ಅಂತಹವರಿಗೆ ಇವರು ತಮ್ಮ ಸ್ವಂತ ವಾಹನವನ್ನೇ ದಿನದ ೨೪ ಗಂಟೆಯೂ ಮೀಸಲಿಟ್ಟಿದ್ದು, ಇದಕ್ಕೆ “ಕೋವಿಡ್-೧೯ ಆಪ್ತ ಮಿತ್ರ” ಎಂದು ಹೆಸರಿಟ್ಟಿದ್ದು, ಈವರೆಗೆ ೨೨ ರೋಗಿಗಳನ್ನು ಕಿಮ್ಸ್, ಎಸ್‌ಡಿಎಮ್, ಚಿಟಗುಪ್ಪಿ ಸೇರಿದಂತೆ ಮುಂತಾದ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಬಂದಿದ್ದಾರೆ.
ವಿಜಯಕುಮಾರ ಅವರು ತಮ್ಮ ಕುಟುಂಬ ಹಾಗೂ ನೆರೆ ಹೊರೆಯ ಜನರ ಸಹಾಯದಿಂದ ಕೊರೋನಾ ಅಪಾಯ ಮತ್ತು ಕೈಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸುವದ ರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವದರ ಜೊತೆಗೆ ಅಗತ್ಯವಿರುವ ಕಡೆಗಳಲ್ಲಿ ಆಹಾರ ಕಿಟ್ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಈಗಾಗಲೇ ಲಾಕ್ ಡೌನ್ ಸಂಕಷ್ಟಕ್ಕೆ ಒಳಗಾದ ಬಡಾವಣೆಯ ಜನರಿಗೆ ಉಚಿತ ಆಹಾರ ವಿತರಿಸಿದ್ದಾರೆ.

ಕುಟುಂಬ-ಗೆಳೆಯರ ಆಸರೆ
ದಿನಂಪ್ರತಿ ಸಂಕಷ್ಟದಲ್ಲಿ ಸಿಲುಕಿರುವವವರಿಗೆ ಸಹಾಯ ಸಹಕಾರ ನೀಡುತ್ತಿರುವ ಇವರ ಜೊತೆಗೆ ಅವರ ಕುಟುಂಬದವರ ಜತೆ ಪ್ರಭುರಾಜ ಬನ್ನಿಮರದ, ಸಾನ್ವಿ, ಅಭಿನಂದನ ಸೇರಿದಂತೆ ಸುನಿಲ ಬಿದರಳ್ಳಿ, ಪಿ.ಕೆ.ಮಂಜು, ಸಂಜು ಸೇರಿದಂತೆ ಹೆಗಲಿಗೆ ಹೆಗಲು ಕೊಟ್ಟಿದ್ದಾರೆ.

ಪ್ರಸಕ್ತ ಸಂದಿಗ್ದ ಸ್ಥಿತಿಯಲ್ಲಿ ಪ್ರಾಮಾಣಿಕವಾಗಿ ನೊಂದವರಿಗೆ, ಬಡವರಿಗೆ ನೆರವಾಗಿದ್ದೇವೆ. ಸಂಕಷ್ಟದಲ್ಲಿರುವ ಜನರಿಗೆ ನೆರವಾದ ಖುಷಿ ಇದೆ. ದಾನ ಮಾಡಿದ್ದು ಹೇಳಿಕೊಳ್ಳಬಾರದು ಎನ್ನುವ ಮಾತಿದೆ. ಅದರಂತೆ ನಾನು ನನ್ನ ಕೈಲಾದ ಸಹಾಯ ಮಾಡಿದ್ದೇನೆ.ನನಗೆ ಕುಟುಂಬ ಹಾಗೂ ಸ್ನೇಹಿತರೂ ಸಹ ವ್ಯಾಪಕ ಬೆಂಬಲ ನೀಡಿದ್ದಾರೆ. ಎಲ್ಲ ಜನರು ಸರ್ಕಾರ ನೀಡುವ ಎಲ್ಲ ಸೂಚನೆಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು .
ವಿಜಯಕುಮಾರ ಮಲ್ಲಿಕಾರ್ಜುನ ಅಪ್ಪಾಜಿ
ಉದ್ಯಮಿ ಹಾಗೂ ಬಿಜೆಪಿ ಯುವ ಮುಖಂಡರು

,

ನವನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವೈದ್ಯಕೀಯ ಚಿಕಿತ್ಸೆ ಪಡೆಯಲು ವಾಹನ ಹಾಗೂ ಸೋಂಕಿತರಿಗೆ ಔಷಧಿ ಕಿಟ್ ಅವಶ್ಯಕತೆ ಇರುವವರು ಇವರ ಮೊಬೈಲ್ ಸಂಖ್ಯೆ ೯೪೪೮೪೧೬೦೯೦ ಮತ್ತು ೮೦೭೩೯೬೧೭೯೩ ಗೆ ಸಂಪರ್ಕಿಸಬಹುದು.

ಬಡವರಿಗೆ ನಿರಂತರ ನೆರವಿನ ಹಸ್ತ ನೀಡಿದ ವಿಜಯಕುಮಾರ ಅಪ್ಪಾಜಿ

administrator

Related Articles

Leave a Reply

Your email address will not be published. Required fields are marked *