ಹುಬ್ಬಳ್ಳಿ-ಧಾರವಾಡ ಸುದ್ದಿ

೮೨ ವಾರ್ಡಗಳಲ್ಲೂ ಆಮ್ ಆದ್ಮಿ ಸ್ಪರ್ಧೆ

ಇಷ್ಟರಲ್ಲೇ ಅಭ್ಯರ್ಥಿಗಳ ಪಟ್ಟಿ ಅಂತಿಮ
ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಯಾವ ಸಂದರ್ಭ ದಲ್ಲಿ ನಡೆದರೂ ಆಮ್ ಆದ್ಮಿ ಪಕ್ಷ ಸಿದ್ಧ ಎಂದು ಪಕ್ಷದ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಅವಳಿನಗರದಲ್ಲಿ ಜನರು ಸಾಂಪ್ರದಾಯಿಕ ಪಕ್ಷಗಳ ಅಧಿಕಾರ ನೋಡಿ ಬೇಸತ್ತು ಹೋಗಿದ್ದು, ಪರ್ಯಾಯ ಪ್ರಬಲ ಪಕ್ಷಕ್ಕಾಗಿ ಕಾಯುತ್ತಾ ಇದ್ದಾರೆ. ಆ ಸ್ಥಾನವನ್ನು ಆಪ್ ತುಂಬಲಿದ್ದು, ಈಗಾಗಲೇ ೮೨ ವಾರ್ಡ್‌ಗಳಲ್ಲೂ ಸಂಭಾವ್ಯ ಅಭ್ಯರ್ಥಿಗಳನ್ನು ಆಯ್ಕೆ ಪ್ರಕ್ರಿಯೆ ನಡೆಯುತ್ತಿದ್ದು, ಇತರೆ ಪಕ್ಷಗಳ ಹಾಗೇ ನಾವು ಬ್ಯಾಂಕ್ ಬ್ಯಾಲೆನ್ಸ್ ನೋಡಿ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದಿಲ್ಲ. ಪಕ್ಷದಿಂದ ಉತ್ತಮ ಹಾಗೂ ಸಮರ್ಥ ಅಭ್ಯರ್ಥಿಗಳನ್ನು ಚುನಾವಣೆ ಕಣಕ್ಕೆ ಇಳಿಸು ತ್ತೇವೆ ನಗರವನ್ನು ವಿಶ್ವದರ್ಜೆಯ ಮಹಾನಗರ ಮಾಡುವ ಗುರಿ ಹೊಂದಲಾಗಿದೆ ಎಂದರು.
ರಾಜ್ಯ ಸಂಚಾಲಕ ರೋಮಿ ಬಾಟಿ ಮಾತನಾಡಿ, ಆಪ್ ಈಗಾಗಲೇ ದೆಹಲಿಯಲ್ಲಿ ಸುವ್ಯವಸ್ಥಿತ ಆಡಳಿತ ನೀಡಿ ಜನರ ಮನಸ್ಸು ಗೆದ್ದಿದೆ, ಅಲ್ಲದೇ ಶಿಕ್ಷಣ, ಆರೋಗ್ಯದಲ್ಲಿ ಕ್ರಾಂತಿ ಮಾಡಿ ಜಗತ್ತಿಗೆ ಮಾದರಿಯಾಗಿದೆ. ಅದೇ ರೀತಿ ಹು-ಧಾ ಅವಳಿನಗರದಲ್ಲಿ ಆಡಳಿತ ನೀಡಲು ಸಿದ್ದಗೊಂಡಿದ್ದು, ಇದನ್ನು ಬರುವ ಪಾಲಿಕೆ ಚುನಾವಣೆ ಮೂಲಕ ನೆನಸು ಮಾಡಲಾಗುವುದು ಎಂದರು.
ಜಿಲ್ಲಾ ಅಧ್ಯಕ್ಷ ಸಂತೋಷ ನರಗುಂದ ಮಾತನಾಡಿ, ಮುಂಬರುವ ಪಾಲಿಕೆ ಚುನಾವಣೆಗೆ ಈಗಾಗಲೇ ಆನ್ಲೈನ್ ಮೂಲಕ ೨೦೦ ಕ್ಕೂ ಹೆಚ್ಚು ಅರ್ಜಿ ಬಂದಿದ್ದು, ನೇರವಾಗಿ ವಾರ್ಡ್ ವೀಕ್ಷಕರ ಮೂಲಕ ಪ್ರತಿ ವಾರ್ಡ್ ನಲ್ಲಿ ೫ ರಿಂದ ೧೦ ಜನರು ಅಭ್ಯರ್ಥಿಗಳಾಗಲು ಸಿದ್ದಗೊಂಡಿದ್ದಾರೆ. ಹೀಗಾಗಿ ರಾಜ್ಯ ನಾಯಕರು ಈ ಪಟ್ಟಿಯನ್ನು ಪರಿಶೀಲನೆ ನಡೆಸಿ ೮೨ ವಾರ್ಡ್ ಗಳಿಗೆ ಅತ್ಯುತ್ತಮ ಅಭ್ಯರ್ಥಿಗಳನ್ನು ತೀರ್ಮಾನ ಮಾಡುವರು. ಈ ಬಾರಿಯ ಪಾಲಿಕೆ ಚುನಾವಣೆಯಲ್ಲಿ ಎಲ್ಲ ವಾರ್ಡ್‌ಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದ್ದು, ಆಮ್ ಆದ್ಮಿ ಪಕ್ಷಕ್ಕೆ ಈ ಚುನಾವಣೆ ಐತಿಹಾಸಿಕ ಚುನಾವಣೆ ಆಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಸಹ ಸಂಚಾಲಕಿ ಶಾಂತಲಾ ದಾಮ್ಲೆ, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಸಂತೋಷ ನರಗುಂದ, ದರ್ಶನ ಜೈನ್, ಬಸವರಾಜ ಮುದಿಗೌಡರ. ಜಂಟಿ ಕಾರ್ಯದರ್ಶಿ ಶಾಮ ನರಗುಂದ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *