ಹುಬ್ಬಳ್ಳಿ-ಧಾರವಾಡ ಸುದ್ದಿ

ಬೊಮ್ಮಾಯಿಗೆ ತವರಲ್ಲೇ ಶಾಕ್; ಹಾನಗಲ್‌ನಲ್ಲಿ ಮಾನೆ ಜಯಭೇರಿ; ಬಿಜೆಪಿ ಮಾನ ಕಾಪಾಡಿದ ಸಿಂದಗಿ

ಹುಬ್ಬಳ್ಳಿ: ರಾಜ್ಯದಾದ್ಯಂತ ತೀವ್ರ ಕುತೂಹಲ ಕೆರಳಿಸಿದ್ದ ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ ಉಪಸಮರದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಜಿಲ್ಲೆಯಲ್ಲಿನ ಹಾನಗಲ್ ಕ್ಷೇತ್ರದಲ್ಲಿನ ಕಾಂಗ್ರೆಸ್ ಗೆಲುವು ಬಿಜೆಪಿಗೆ ತೀವ್ರ ಮುಖಭಂಗವುAಟು ಮಾಡಿದ್ದರೆ, ಸಿಂದಗಿಯಲ್ಲಿನ ಭರ್ಜರಿ ಗೆಲುವು ಅಲ್ಪ ಸಮಾಧಾನಕ್ಕೆ ಕಾರಣವಾಗಿದೆ.


ದಿ.30ರಂದು ಮತದಾನಕ್ಕೆ ಮೊದಲೇ ಸರ್ಕಾರದ ಗುಪ್ತದಳದ ಆಡಳಿತ ಪಕ್ಷಕ್ಕೆ ಹಿನ್ನೆಡೆ ಎಂಬ ನಿಶ್ಚಿತ ಎಂಬ ವರದಿಯಂತೆ ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ 7598 ಮತಗಳ ಗೆಲುವು ದಾಖಲಿಸುವ ಮೂಲಕ ಹಾವೇರಿ ಜಿಲ್ಲೆಯಲ್ಲ್ಲಿ ಶೂನ್ಯವಾಗಿದ್ದ ಕೈ ಅಸ್ಥಿತ್ವಕ್ಕೆ ಮುನ್ನುಡಿ ಬರೆದಿದ್ದಾರೆ.


ಅಂತಿಮ 19 ನೇ ಸುತ್ತಿನ ಅಂತ್ಯಕ್ಕೆ ಮಾನೆ 87113 ಮತ ಪಡೆದರೆ, ಪರಾಭವಗೊಂಡ ಬಿಜೆಪಿಯ ಶಿವರಾಜ ಸಜ್ಜನರ 79545 ಮತಗಳನ್ನು ಪಡೆದರು. ಜೆಡಿಎಸ್‌ನ ನಿಯಾಜ ಶೇಖ ನಾಲ್ಕಂಕಿಯನ್ನೂ ತಲುಪಲಿಲ್ಲ.
ಹಾವೇರಿ ಜಿಲ್ಲೆಯಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸರ್ಕಾರದ ಡಜನ್‌ಗಟ್ಟಲೇ ಸಚಿವರ ದಂಡು ಹಾನಗಲ್‌ನಲ್ಲೇ ಬಿಡಾರ ಹೂಡಿ ಪ್ರಚಾರ ನಡೆಸಿದ್ದರಾದರೂ ಯಾವುದೇ ಪ್ರಯೋಜನವಾಗಿಲ್ಲ. ಗುಪ್ತಚರ ಇಲಾಖೆಯ ವರದಿಯಂತೆ ಮತದಾನದ ಮುನ್ನಾದಿನ ಸ್ವತಃ ಸಿಎಂ ತಂತ್ರಗಾರಿಕೆ ಬದಲಿಸಿ ವಶಕ್ಕೆ ತೆಗೆದುಕೊಳ್ಳುವ ಅನೇಕ ಕಸರತ್ತು ನಡೆಸಿದರಾದರೂ ಬಿಜೆಪಿಗೆ ಗೆಲುವು ಧಕ್ಕಲಿಲ್ಲ.


ಎರಡನೇ ಸುತ್ತಿನಲ್ಲಿ ಬಿಜೆಪಿ ಅಲ್ಪ ಮತದ ಮುನ್ನಡೆ ಬಿಟ್ಟರೆ, ಮೊದಲನೆ ಸುತ್ತಿನಿಂದ ಪ್ರತಿ ಸುತ್ತಿನಲ್ಲೂ ಕಾಂಗ್ರೆಸ್‌ನ ಮಾನೆ ಮುನ್ನಡೆ ಬಿಟ್ಟುಕೊಟ್ಟಿಲ್ಲವಾಗಿದ್ದು 14 ಸುತ್ತಿನ ನಂತರ 64489 ಹಾಗೂ ಸಜ್ಜನರ 57 682 ಮತಗಳನ್ನು ಪಡೆದಿದ್ದರು.

ಕಳೆದ ಬಾರಿ ದಿ.ಸಿ.ಎಂ.ಉದಾಸಿಯವರ ಎದುರು 2018ರ ಚುನಾವಣೆಯಲ್ಲಿ ಸುಮಾರು 6 ಸಾವಿರ ಮತಗಳಿಂದ ಪರಾಭವಗೊಂಡಿದ್ದ ಮಾನೆ ಅಲ್ಲಿಯೇ ಮನೆ ಮಾಡಿದ್ದಲ್ಲದೇ ಕ್ಷೇತ್ರದ ಸಮಸ್ಯೆಗೆ ಸ್ಪಂದಿಸಿದ್ದು ಇಂದು ಅವರ ಗೆಲುವಿಗೆ ರಹದಾರಿಯಾಯಿತಲ್ಲದೇ ಪ್ರಚಾರದ ಅಂತಿಮ ದಿನ ಹಾನಗಲ್‌ನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಶ್ರೀನಿವಾಸ ಮಾನೆ ಮಾಡಿದ ಭಾವನಾತ್ಮಕ ಭಾಷಣ ಜಯವನ್ನು ಮತ್ತಷ್ಟು ಸುಲಭವಾಗಿಸಿತು.


ಅಲ್ಲದೇ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಸಹ ಪ್ರಚಾರ ಮಾಡಿದ್ದರಲ್ಲದೇ ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷದ ಗೆಲುವಿಗಾಗಿ ವ್ಯಾಪಕವಾಗಿ ಶ್ರಮಿಸಿದ್ದರು.
ಸಿಂದಗಿ ವಿವರ : ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಭೂಸನೂರ 31,185 ಮತಗಳ ಅಂತರದಿAದ ಬಿಜೆಪಿ ಅಭ್ಯರ್ಥಿ ಕಾಂಗ್ರೆಸ್ ವಿರುದ್ಧ ಜಯಸಾಧಿಸಿದ್ದಾರೆ.


ಭೂಸನೂರಗೆ 93,865 ಮತ. ಕಾಂಗ್ರೆಸ್ ಅಭ್ಯರ್ಥಿ ರಮೇಶ್ ಮನಗೂಳಿಗೆ 62,680 ಮತ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿಗೆ 4,353 ಮತ ದೊರೆತಿದೆ. ಜೆಡಿಎಸ್ ಅಭ್ಯರ್ಥಿ ನಾಜಿಯಾ ಅಂಗಡಿ ಠೇವಣಿ ಕಳೆದುಕೊಳ್ಳುವ ಮೂಲಕ ಪಕ್ಷಕ್ಕೆ ಮುಜುಗುರವುಂಟು ಮಾಡಿದ್ದಾರೆ.
ಮುಂದಿನ ಸಾರ್ವತ್ರಿಕ ಚುನಾವಣೆ ಸನಿಹದಲ್ಲೇ ಇರುವಾಗ ಪ್ರಾಮುಖ್ಯತೆ ಪಡೆದಿದ್ದ ಚುನಾವಣೆಯಲ್ಲಿ ರಮೇಶ್ ಭೂಸನೂರು ಪರ ಕಳೆದ ಬಾರಿಯ ಕಡಿಮೆ ಅಂತರದ ಸೋಲಿನ ಅನುಕಂಪ ಕೆಲಸ ಮಾಡಿದೆ.
ಇದೇ ವೇಳೆ ಅನುಕಂಪದ ಮೇಲೆ ಕಣ್ಣಿಟ್ಟು ದಿವಂಗತ ಮನಗೂಳಿ ಅವರ ಮಗ ರಮೇಶ್ ಮನಗೂಳಿ ಕರೆದುಕೊಂಡು ಬಂದು ಕಾಂಗ್ರೆಸ್ ಅವರಿಗೆ ಟಿಕೆಟ್ ನೀಡಿತು. ಜೆಡಿಎಸ್ ನಿಂದ ಬಂದ ಅಶೋಕ್ ಗೆ ಟಿಕೆಟ್ ನೀಡಿದ್ದಕ್ಕೆ ಪಕ್ಷದೊಳಗೆ ಅಸಮಾಧಾನಕ್ಕೆ ಕಾರಣವಾಗಿತ್ತು.

 

administrator

Related Articles

Leave a Reply

Your email address will not be published. Required fields are marked *