24ರಂದು ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮ
ಧಾರವಾಡ: ಕಾಂಗ್ರೆಸ್ ಪಕ್ಷದಿಂದ ನಗರದಲ್ಲಿ ಇತ್ತಿಷೆಗೆ ನಡೆದ ಪ್ರತಿಭಟನೆ ವೇಳೆ ಸಾವರ್ಕರ್ ವಿಚಾರದಲ್ಲಿ ಶಾಸಕ ಅರವಿಂದ ಬೆಲ್ಲದ ಅವರು ಬೆಳಗಿನ ಜಾವ ೪ ಗಂಟೆಗೆ ಕಾರ್ಯಕರ್ತರ ಮನೆಗೆ ಪೊಲೀಸರನ್ನು ಕಳುಹಿಸಿ ಬಂಧಿಸುವ ಮುಖಾಂತರ ಹೆದರಿಸುವ ಕೆಲಸ ಮಾಡಿಸುತ್ತಿದ್ದಾರೆ ಎಂದು ರಾಣಿ ಚೆನ್ನಮ್ಮ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ ಗೌರಿ ಆರೋಪಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರ ಇಂಥ ರಾಜಕೀಯವನ್ನು ಕಾಂಗ್ರೆಸ್ ಸಹಿಸುವುದಿಲ್ಲ. ಅಲ್ಲದೇ ಇಂತಹ ಕೃತ್ಯ ಬಹಳ ದಿನ ನಡೆಯುವುದಿಲ್ಲ. ಇದಕ್ಕೆ ನಮ್ಮ ಕಾರ್ಯಕರ್ತರು ಹೆದರುವದಿಲ್ಲ ಎಂದು ಸ್ಪಷ್ಟಪಡಿಸಿದರು.
ಶಾಸಕರ ಅವಧಿ ೮ ತಿಂಗಳಲ್ಲಿ ಕೊನೆಗೊಳ್ಳುತ್ತದೆ. ಮುಂದೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುತ್ತದೆ. ಆಗ ಶಾಸಕ ಅರವಿಂದ ಬೆಲ್ಲದ ಅವರ ಮನೆಗೂ ಪೊಲೀಸರು ಬರುತ್ತಾರೆ. ಇದನ್ನು ಬೆಲ್ಲದ ಅರಿಯಬೇಕೆಂದರು. ವಿನಾಕಾರಣ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಕಿರುಕುಳ ನೀಡುವುದನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಎಐಸಿಸಿ, ಕೆಪಿಸಿಸಿ ಆದೇಶದ ಮೇರೆಗೆ ಕಾಂಗ್ರೆಸ್ ರಾಣಿ ಚೆನ್ನಮ್ಮ ಬ್ಲಾಕ್ ವತಿಯಿಂದ ಆ. 24ರಂದು ಬೆಳಗ್ಗೆ 10.30ಕ್ಕೆ ನಗರದಲ್ಲಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಗಾಂಧಿನಗರದ ಈಶ್ವರ ದೇವಸ್ಥಾನದಿಂದ ಆರಂಭಿಸಿ ಕಲಾಭವನದವರೆಗೆ ಪಾದಯಾತ್ರೆ ನಡೆಸಲಾಗುವುದು. ಕೆಪಿಸಿಸಿ ರ್ಯಾಧ್ಯಕ್ಷರಾದ ಸತೀಶ ಜಾರಕಿಹೊಳಿ, ಸಲೀಂ ಅಹ್ಮದ್ ಹಾಗೂ ಉಸ್ತುವಾರಿ ಪಿ.ವಿ. ಮೋಹನ ಪಾಲ್ಗೊಳ್ಳುವರು.
ಸ್ವಾತಂತ್ರ್ಯದ ಪಕ್ಷಾತೀತ ನಡಿಗೆ ಕಾರ್ಯಕ್ರಮವಾಗಿದ್ದು, ಸರ್ವ ಜನಾಂಗದ ವರು ಪಾಲ್ಗೊಳ್ಳಬೇಕೆಂದು ಗೌರಿ ಮನವಿ ಮಾಡಿದರು.