ಧಾರವಾಡ: ನಿತ್ಯ ಶಿವಧ್ಯಾನ ಮಾಡಬೇಕು. ವಿಶ್ವಗುರು ಬಸವಣ್ಣನ ತತ್ವಗಳನ್ನು ಅಳವಡಿಸಿಕೊಳ್ಳಬೇಕು ಎಂದು ಸದಾಶಿವನಗರದ ಮಹಿಳಾ ಮಂಡಳದ ಅಧ್ಯಕ್ಷೆ ಕಸ್ತೂರಿ ಜಿಗಜಿನ್ನಿ ಹೇಳಿದರು.
ಧಾರವಾಡದ ಸದಾಶಿವನಗರದಲ್ಲಿರುವ ಸಿದ್ಧಿ ವಿನಾಯಕ ದೇವಸ್ಥಾನದ ಮಂಟಪದಲ್ಲಿ ಮಹಿಳಾ ಮಂಡಳದ ವತಿಯಿಂದ ಹಮ್ಮಿಕೊಂಡಿದ್ದ ಶಿವರಾತ್ರಿ ಆಚರಣೆಯಲ್ಲಿ ಅವರು ಮಾತನಾಡಿದರು.
ನಿರಂತರ ಶಿವನ ಪೂಜೆ ಮಾಡುವುದರಿಂದ ಚೈತನ್ಯ ಪಡೆಯುವುದಲ್ಲದೆ ಉತ್ತಮ ಸಂಸ್ಕಾರ ಹೊಂದಬಹುದು. ಶರಣ ಸಂಸ್ಕೃತಿ ಹಾಗೂ ಲಿಂಗ ಧರಿಸುವುದೇ ಶಿವಸೇವೆಯಾಗಿದೆ ಎಂದರು.
ಲಿಂಗಾಯತರಿಗೆ ಲಿಂಗ ಪೂಜೆ ಮಾಡುವುದೇ ಜೀವನದಲ್ಲಿ ಅತ್ಯಂತ ಶ್ರೇಷ್ಠವಾದದ್ದಾಗಿದೆ ಎಂದರು.
ಈ ಸಂದರ್ಭದಲ್ಲಿ ಮಹಿಳಾ ಮಂಡಳದವರು ಶಿವನ ಪೂಜೆ ಮಾಡಿ, ವಚನಗಳನ್ನು ಪಠಿಸಿ, ಅಷ್ಟೋತ್ತರ ನಾಮವಳಿ ಹೇಳಿ ವಿಜೃಂಭಣೆಯಿಂದ ಶಿವರಾತ್ರಿ ಆಚರಿಸಿದರು.
ಶಿವಲೀಲಾ ಬಾಳನಗೌಡ್ರ, ಪ್ರೇಮಾ ದೊಡವಾಡ, ಚಂದ್ರಾ ಕೋರಿಶೆಟ್ಟರ, ವಿದ್ಯಾ ಮೆಣಸಿನಕಾಯಿ, ಸುಶೀಲಾ ಜಕ್ಕಲಿ, ಹೀರಾ ಒಳಸಂಗ, ವಿಜಯಾ ನಾಡಿಗೇರ, ಶೈಲಾ ತೊರಗಲ್ಲಮಠ, ಇಂಧುಮತಿ, ಮೇಘಾ ಕುಲಕರ್ಣಿ ಸೇರಿದಂತೆ ಸದಾಶಿವನಗರದ ನಿವಾಸಿಗಳು ಇದ್ದರು.