ಹುಬ್ಬಳ್ಳಿ-ಧಾರವಾಡ ಸುದ್ದಿ
ಹೆಚ್ಚಿನ ಶ್ರಮದಿಂದ ’ಗುರಿ’ ನನಸು

ಹೆಚ್ಚಿನ ಶ್ರಮದಿಂದ ’ಗುರಿ’ ನನಸು

ಹಾಕಿ ಪಯಣ ಬಿಚ್ಚಿಟ್ಟ ಮಾಜಿ ಭಾರತೀಯ ಫೀಲ್ಡ್ ಹಾಕಿ ಆಟಗಾರ ಲೆನ್ ಅಯ್ಯಪ್ಪ

ಹುಬ್ಬಳ್ಳಿ: ಯಾವುದೇ ವ್ಯಕ್ತಿ ಆಗಲಿ ಗುರಿ ಇಟ್ಟುಕೊಂಡರೆ ಅದರ ಬಗ್ಗೆ ಕನಸು ಕಾಣಬೇಕು. ಆ ಕನಸು ನನಸಾಗಲು ಹೆಚ್ಚಿನ ಶ್ರಮ ಪಡಬೇಕು ಅಂದಾಗ ಮಾತ್ರ ನೀವು ಜೀವನದಲ್ಲಿ ಏನಾದರು ಸಾಧಿಸಲು ಸಾಧ್ಯ ಎಂದು ಮಾಜಿ ಭಾರತೀಯ ಫೀಲ್ಡ್ ಹಾಕಿ ಆಟಗಾರ ಲೆನ್ ಅಯ್ಯಪ್ಪ ಹೇಳಿದರು.
ಅವರು ತಮ್ಮ ಖಾಸಗಿ ಕಾರ್ಯಕ್ರಮಕ್ಕೆ ನಗರಕ್ಕೆ ಆಗಮಿಸಿದಾಗ ಮಾಜಿ ರಣಜಿ ಕ್ರಿಕೆಟ್ ಆಟಗಾರ ಸೋಮಶೇಖರ್ ಶಿರಗುಪ್ಪಿ ಅವರ ತೇಜಲ್ ಕ್ರಿಕೆಟ್ ಅಕಾಡೆಮಿಗೆ ಭೇಟಿ ನೀಡಿ ಯುವ ಪ್ರತಿಭೆಗಳೊಂದಿಗೆ ತಮ್ಮ ಅನುಭವ ಹಂಚಿಕೊಂಡರು.


ತಾವು 1997ರಲ್ಲಿ ನೆದರಲ್ಯಾಂಡ್ ಪಂದ್ಯ ನೋಡಲು ಹೋಗಿದ್ದೇ. ಅಂದು ಆ ಪಂದ್ಯ ನೋಡಿದ ದಿನದಿಂದ ನಾನು ಅದೇ ರೀತಿ ನಾನು ಕೂಡಾ ಆಟ ಆಡಬೇಕು ಎಂದು ಕನಸು ಕಾಣಲು ಆರಂಭಿಸಿದೆ. ಅಂದಿನಿಂದಲೇ ನಾನು ನಿತ್ಯ ಹಗಲು ರಾತ್ರಿ ಎನ್ನದೇ ಅಭ್ಯಾಸ ಆರಂಭಿಸಿದೆ. ಮುಂದೆ 2004ರಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗಿ ಅದೇ ತಂಡದ ವಿರುದ್ಧ ಆಟ ಆಡಿದೆ. ಇದು ಸಾಧ್ಯ ಆಗಿದ್ದು ನಾನು ಕಂಡ ಕನಸು ನನಸಾಗಲು ಕಠಿಣ ಶ್ರಮವೇ ಕಾರಣ. ಅದರಿಂದ ನಾನು ದೇಶದ ಹಾಕಿ ತಂಡದಲ್ಲಿ ಆಟ ಆಡುವ ಅವಕಾಶ ತಮ್ಮದಾಯಿತು ಎಂದು ತಮ್ಮ ಹಾಕಿ ಪಯಣವನ್ನು ಬಿಚ್ಚಿಟ್ಟರು.


ವರ್ಲ್ಡ್ ಸೀರೀಸ್ ಹಾಕಿಯ ಉದ್ಘಾಟನಾ ಋತುವಿನಲ್ಲಿ ಕರ್ನಾಟಕ ಲಯನ್ಸ್ ಪರ ಆಟವಾಡುತ್ತಿದ್ದಾಗ 12 ಪಂದ್ಯದಲ್ಲಿ 13 ಗೋಲು ಗಳಿಸುವ ಮೂಲಕ ತಂಡದ ಅಗ್ರ ಸ್ಕೋರರ್ ಆಗಿದ್ದೆ. ಚಂಡೀಗಢ ಕಾಮೆಟ್ಸ್ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲ್ ಗಳಿಸಿದ್ದೆ ಎಂದು ತಮ್ಮ ಸಾಧನೆ ಬಗ್ಗೆ ತಿಳಿಸಿದರು.

ಯಾವುದೇ ಆಟಗಾರರು ಒಬ್ಬ ಒಳ್ಳೆ ಆಟಗಾರಬೇಕೆಂದರೆ ಬೇಸಿಕ್ ತುಂಬಾ ಅವಶ್ಯಕ. ಶಾಲೆ ಕಲಿಯಲು ಆರಂಭಿಸುವಾಗ ಪ್ರಾಥಮಿಕ ಶಿಕ್ಷಣ ಹೇಗೆ ಅವಶ್ಯಕವೇ ಅದೇ ರೀತಿ ಕ್ರೀಡೆಯಲ್ಲಿ ಕೂಡಾ ಯಾವುದೇ ಆಟ ಇರಲಿ ಆಟದ ಪ್ರಾಥಮಿಕ ಹಂತಗಳು ಹಾಗೂ ಫಿಟ್‌ನೆಸ್ ಬಹು ಮುಖ್ಯ. ಯುವ ಪ್ರತಿಭೆಗಳಾದ ನೀವು ಇವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ ಎಂದು ಕಿವಿಮಾತು ಹೇಳಿದರು.


ಸೋಮಶೇಖರ ಶಿರಗುಪ್ಪಿ ಒಬ್ಬ ಒಳ್ಳೆ ತರಬೇತುದಾರ. ಇವರನ್ನು ನಾನು ಈ ಹಿಂದೆಯೇ ಬೆಂಗಳೂರಿನಲ್ಲಿ ಇವರ ತರಬೇತಿ ಬಗ್ಗೆ ಕೇಳಿದ್ದಲ್ಲದೇ ಸ್ವತಹಾ ನೋಡಿದ್ದೇನೆ. ಇವರು ಹೇಳಿಕೊಡುವ ಪ್ರಾಥಮಿಕ ಹಂತದ ಕೌಶಲಗಳು ನಿಮಗೆ ಮುಂದೆ ಉಪಯೋಗಕ್ಕೆ ಬರುತ್ತದೆ. ಇಂತಹ ತರಬೇತುದಾರರ ಕೈಯಲ್ಲಿ ನೀವು ತರಬೇತಿ ಪಡೆದುಕೊಳ್ಳುತ್ತಿರುವುದು ನೀವು ಅದೃಷ್ಟವಂತರು ಎಂದು ಹೇಳಿದರು.
ತರಬೇತುದಾರರು ಹೇಳಿಕೊಟ್ಟ ಕೌಶಲಗಳನ್ನು ಚಾಚು ತಪ್ಪದೇ ಪಾಲಿಸಿ ಅದರಿಂದ ನಿಮಗೆ ಉಜ್ವಲ ಭವಿಷ್ಯವಿದೆ ಎಂದು ಹೇಳಿ ಎಲ್ಲ ಕ್ರೀಡಾಪಟುಗಳಿಗೆ ಒಳ್ಳೆಯದಾಗಲಿ ಎಂದು ಶುಭ ಹಾರೈಯಿಸಿದರು.
ಇದೇ ಸಂದರ್ಭದಲ್ಲಿ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ ಮೆಂಟರ್ ಸೋಮಶೇಖರ ಶಿರಗುಪ್ಪಿ ಅವರು ಲೆನ್ ಅಯ್ಯಪ್ಪ ಅವರನ್ನು ಸನ್ಮಾನಿಸಿದರು. ತರಬೇತುದಾರರಾದ ಪ್ರಮೋದ ಜಂಬಗಿ, ವಿನೋದ, ಮಂಜು ದೊಡಮನಿ, ಚಂದ್ರಶೇಖರ್ ಅಣ್ಣಿಗೇರಿ ಸೇರಿದಂತೆ ಇತರರಿದ್ದರು.

administrator

Related Articles

Leave a Reply

Your email address will not be published. Required fields are marked *