ಹುಬ್ಬಳ್ಳಿ-ಧಾರವಾಡ ಸುದ್ದಿ
ವಚನ ಬೆಳಕು;    ಅಂಗದಲ್ಲಿ ಆಚಾರ

ವಚನ ಬೆಳಕು; ಅಂಗದಲ್ಲಿ ಆಚಾರ

ಅಂಗದಲ್ಲಿ ಆಚಾರ

ಅಂಗದಲ್ಲಿ ಆಚಾರವ ತೋರಿದ;
ಆ ಆಚಾರವೇ ಲಿಂಗವೆಂದರುಹಿದ.
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ;
ಆ ಅರಿವೆ ಜಂಗಮವೆಂದು ತೋರಿದ.
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ.

                                     -ಅಕ್ಕ ಮಹಾದೇವಿ

ಇಷ್ಟಲಿಂಗ ಸಂಬಂಧವಾದ ಆಚಾರಗಳಿಂದ ಕಾಯವನ್ನೇ ಕೈಲಾಸ ಮಾಡಿಕೊಳ್ಳಬಹುದು. ಚೆನ್ನಬಸವಣ್ಣನವರು ಇಷ್ಟಲಿಂಗದೀಕ್ಷೆಗಾಗಿ ಸಿದ್ಧರಾಮರಿಗೆ ಐವತ್ತು ಬಗೆಯ ಆಚಾರಗಳನ್ನು ಬೋಧಿಸಿದ್ದಾರೆ: ಪರಸ್ತ್ರೀಯನ್ನು ಬಯಸದೆ ಇರುವುದು. ಪರಧನವನ್ನು ಅಪಹರಿಸದಿರುವುದು. ಹುಸಿಯ ನುಡಿಯದಿರುವುದು. ವಿಶ್ವಾಸಘಾತ ಮಾಡದಿರುವುದು. ಪ್ರಾಣಿಹಿಂಸೆಯ ಮಾಡದಿರುವುದು. ಶರಣಸಂಕುಲವನ್ನು ಸಂತೋಷದಲ್ಲಿಡುವುದು. ಕೆಟ್ಟವರ ಸಹವಾಸ ಮಾಡದಿರುವುದು. ಸಕಲ ಜೀವಿಗಳ ಹಿತ ಬಯಸುವುದು. ಜಂಗಮದಲ್ಲಿ ಕುಲವನರಿಸದಿರುವುದು ಮುಂತಾದವು.
ಬಾಹ್ಯಕ್ರಿಯೆಗಳನ್ನು ಶುದ್ಧಗೊಳಿಸುವ ಪಂಚಾಚಾರ: ಅನ್ಯದೈವಕ್ಕೆರಗದೆ ಇಷ್ಟಲಿಂಗ ಪೂಜೆ ಮಾಡುವುದು ಲಿಂಗಾಚಾರ, ಸತ್ಯಶುದ್ಧ ಕಾಯಕವನ್ನು ಮಾಡುತ್ತ ದಯಾಭಾವದೊಂದಿಗೆ ಬದುಕುವುದು ಸದಾಚಾರ, ಜಾತಿಭೇದ ಮಡದೆ ಶಿವಲಾಂಛನಧಾರಿಗಳನ್ನು ಪರಶಿವನೆಂದು ಭಾವಿಸುವುದು ಶಿವಾಚಾರ, ಶಿವನಿಂದೆಯನ್ನು ಕೇಳದಿರುವುದು ಗಣಾಚಾರ ಹಾಗೂ ‘ಶರಣರೆಲ್ಲ ಹಿರಿಯರು ತಾನು ಕಿರಿಯ’ ಎಂಬ ಭಾವ ತಾಳಿ ಸೇವೆ ಮಾಡುವುದು ಭೃತ್ಯಾಚಾರ.
ಅಂತರಂಗದ ಕ್ರಿಯೆಗಳನ್ನು ಶುದ್ಧಗೊಳಿಸುವ ಸಪ್ತಾಚಾರ: ಗುರು ಲಿಂಗ ಜಂಗಮಾರಾಧನೆ ಮಾಡುವುದು ಕ್ರಿಯಾಚಾರ. ಶರಣರ ವಚನಾನುಭವ ಅರಿತು ಆಚರಿಸುವುದು ಜ್ಞಾನಾಚಾರ. ಅರಿಷಡ್ವರ್ಗಗಳಿಂದ ದೂರಾಗಿ ಬದುಕುವುದು ಭಾವಾಚಾರ. ಕೊಟ್ಟ ಭಾಷೆಯನ್ನು ನಡೆಸಿಕೊಡುವುದು ಸತ್ಯಾಚಾರ. ಪಾಲಿಗೆ ಬಂದ ಪ್ರಸಾದದಲ್ಲಿ ಸುಖಿಸುವುದು ನಿತ್ಯಾಚಾರ. ಭಕ್ತಿಯಿಂದ ಕೂಡಿರುವುದು ಧರ್ಮಾಚಾರ. ಷಟ್‌ಸ್ಥಲ ಮಾರ್ಗದಲ್ಲಿ ನಡೆದು ನಿರವಯವನ್ನು ಸಾಧಿಸುವುದು ಸರ್ವಾಚಾರ.
ತ್ರಿವಿಧ ಆಚಾರ: ಎಲ್ಲ ಜನ ಅಹುದೆಂಬುದೇ ಸದಾಚಾರ, ಹಿಡಿದ ವ್ರತ ನಿಯಮವ ಬಿಡದಿಹುದೆ ನಿಯತಾಚಾರ, ಶಿವನಿಂದೆಯ ಕೇಳದಿಹುದೇ ಗಣಾಚಾರ. ಹೀಗೆ ೫೦ ಆಚಾರ, ಪಂಚಾಚಾರ, ಸಪ್ತಾಚಾರ ಮತ್ತು ತ್ರಿವಿಧ ಆಚಾರಗಳನ್ನು ತನ್ನಂಗದಲ್ಲಿ ಅಳವಡಿಸಿಕೊಂಡವರು ಲಿಂಗದೇಹಿಗಳು ಆಗುತ್ತಾರೆ.

ವಚನ -ನಿರ್ವಚನ: ರಂಜಾನ್ ದರ್ಗಾ

administrator

Related Articles

Leave a Reply

Your email address will not be published. Required fields are marked *