ಭ್ರಷ್ಟಾಚಾರ ರಹಿತ ಆಡಳಿತಕ್ಕೆ ಮುನ್ನುಡಿ ಬರೆದವರು ಮೋದಿಜಿ
ಧಾರವಾಡ: 2023ರ ವಿಧಾನಸಭೆ ಹಾಗೂ 2024ಲೋಕಸಭೆ ಚುನಾವಣೆ ಎರಡರಲ್ಲೂ ಮತ್ತೆ ಬಿಜೆಪಿ ಸರ್ಕಾರ ರಚನೆಯಾಗುವುದು ನಿಶ್ಚಿತ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಸರ್ಕಾರದ 8 ವರ್ಷಗಳ ಆಡಳಿತಾವಧಿಯ ಸಾಧನೆಗಳನ್ನು ವಿವರ ನೀಡಲು ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ಪಂಚ ರಾಜ್ಯ ಚುನಾವಣೆಯಲ್ಲಿ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಮಹತ್ವದ ಗೆಲುವು ದಾಖಲಿಸಿರುವುದು ಮುಂದಿನ ಬಿಜೆಪಿ ಅಧಿಕಾರದ ಮುನ್ಸೂಚನೆಯಾಗಿದೆ ಎಂದು ಹೇಳಿದರು.
ದೂರದೃಷ್ಟಿಯ ಯೋಜನೆಗಳು, ಯೋಜನೆಗಳ ಅನುಷ್ಠಾನಕ್ಕೆ ಬದ್ಧತೆ, ನೇರ ಸೌಲಭ್ಯ ವರ್ಗಾವಣೆ (ಡಿಬಿಟಿ) ಮೂಲಕ ಭ್ರಷ್ಟಾಚಾರವನ್ನು ದೂರವಿಟ್ಟ ಮಹಾನ್ ನಾಯಕರು ಮೋದಿಯವರಾಗಿದ್ದು, 8 ವರ್ಷಗಳ ಕೃಷಿಗೆ ಬಜೆಟ್ನಲ್ಲಿ ಆರು ಪಟ್ಟು ಹೆಚ್ಚಳವಾಗಿದೆ. ರೈತರ ಕಲ್ಯಾಣಕ್ಕಾಗಿ ಕೇಂದ್ರ ಸರ್ಕಾರದ ಪ್ರಾಮಾಣಿಕ ಚಿಂತನೆಗೆ ಇದು ನಿದರ್ಶನವಾಗಿದೆ ಎಂದರು.
ಸರ್ಕಾರದ 8 ವರ್ಷಗಳ ಆಡಳಿತಾವಧಿಯಲ್ಲಿ ಆಡಳಿತ ನಿರ್ವಹಣೆ, ಸಾರ್ವಜನಿಕ ಸೇವೆ, ಅಭಿವೃದ್ಧಿ ಕಾರ್ಯಗಳು, ಬಡಜನರಿಗಾಗಿ ರೂಪಿಸಿರುವ ಯೋಜನೆಗಳಾದ ಆಯು?ನ್ ಭಾರತ ಯೋಜನೆ, ಉಜ್ವಲಾ ಯೋಜನೆ, ಜನ ಧನ್ ಯೋಜನೆ, ಕಿಸಾನ್ ಸಮ್ಮಾನ್ ನಿಧಿ 6- ಎಲ್ಲರಿಗೂ ಮನೆ, ಸ್ವಚ್ಛ ಭಾರತ, ಮುದ್ರಾಯೋಜನೆಗಳು ದೇಶದ ದಿಕ್ಕು ಬದಲಿಸಿವೆ ಎಂದರು.
ರಾಮ ಮಂದಿರ ನಿರ್ಮಾಣಕ್ಕೆ ನಾಂದಿ ಹಾಡಿದ್ದು, ಕಾಶಿಯಲ್ಲಿ ಸುಸಜ್ಜಿತ ಕಾರಿಡಾರ್ ನಿರ್ಮಾಣ, ಪುಣ್ಯಸ್ಥಳಗಳಲ್ಲಿ ಸೌಲಭ್ಯ ವರ್ಧನೆಗೆ ’ಪ್ರಸಾದ’ ಯೋಜನೆ, ಚಾರಧಾಮ ಅಭಿವೃದ್ಧಿ ಸಹಿತ ಹತ್ತು ಹಲವು ಧಾರ್ಮಿಕ, ಸಾಂಸ್ಕೃತಿಕ ತಾಣಗಳ ಸಂರಕ್ಷಣೆ ಅಭಿವೃದ್ಧಿ ಮಾಡಲಾಗಿದೆ ಎಂದರು.
ಕಾಂಗ್ರೆಸ್ ನಾಯಕರು ತಾವು ಮುಳುಗುವ ಜೊತೆಗೆ ಕೈ ಹಿಡಿದವರನ್ನೂ ಮುಗಿಸುತ್ತಾರೆ. ಎಂದು ಪ್ರಶಾಂತ್ ಕಿಶೋರ್ ಹೇಳಿದ್ದು ಕಾಂಗ್ರೆಸ್ನ ಅಧೋಗತಿಗೆ ಹಿಡಿದ ಕೈಗನ್ನಡಿ ಇದಾಗಿದೆ ಎಂದರು.
ಮಹಾನಗರ ಪಾಲಿಕೆ ಮಹಾಪೌರರು ಈರೇಶ ಅಂಚಟಗೇರಿ, ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ್ ಕಪಟಕರ್, ಜಿಲ್ಲಾ ವಕ್ತಾರ ರವಿ ನಾಯಕ, ಜಿಲ್ಲಾ ಮಾಧ್ಯಮ ಸಂಚಾಲಕರು ಪ್ರಶಾಂತ ಹಾವಣಗಿ, ಜಿಲ್ಲಾ ಸಹ ಸಂಚಲಕರು ಮೋಹನ್ ರಾಮದುರ್ಗ, ಶಿವು ಹೀರೆಮಠ, ತಿಪ್ಪಣ್ಣ ಮಜ್ಜಿಗಿ, ಪ್ರಮೂದ ಕಾರ್ಕೂನ, ಗೋಪಿ ಕಟ್ಟಿ, ಬಸವರಾಜ ಗರಗ, ಪಾಲಿಕೆ ಸದಸ್ಯರು, ವಕ್ತಾರ ರವಿ ನಾಯಕ ಗೋಷ್ಠಿಯಲ್ಲಿದ್ದರು.