’ಸರ್ವಸ್ವ’ ಕೊಟ್ಟರೂ ಮದುವೆಗೆ ನಿರಾಕರಣೆ
ಧಾರವಾಡ : ಮದುವೆಯಾಗುವುದಾಗಿ ನಂಬಿಸಿದ ಸೈನಿಕನ ನಯವಾದ ಪ್ರೀತಿಯ ಮಾತಿಗೆ ಮರುಳಾಗಿ ವಂಚನೆಗೊಳಗಾದ ಯುವತಿ ಇದೀಗ ಆತನನ್ನೇ ಮದುವೆಯಾಗುವುದಾಗಿ ಪಟ್ಟು ಹಿಡಿದಿದ್ದು, ಈ ಸಂಬಂಧ ತನಗೆ ನ್ಯಾಯ ಕೊಡಿಸುವಂತೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿದ್ದಾಳೆ.
ಕಲಘಟಗಿ ತಾಲೂಕಿನ ಬಮ್ಮಿಗಟ್ಟಿಯ ಜ್ಯೋತಿ ಈರಪ್ಪ ಅಕ್ಕಿ ವಂಚನೆಗೊಳಗಾದ ಯುವತಿಯಾಗಿದ್ದು, ಸಮೀಪದ ಬೋಗೆನಾಗರಕೊಪ್ಪ ಗ್ರಾಮದ ಸಂಜು ಬಸಪ್ಪ ಪೂಜಾರ ಎಂಬಾತನೇ ವಂಚಿಸಿದ ಯುವಕ.
ಅಪರಿಚಿತರಾಗಿದ್ದ ಇಬ್ಬರೂ ಕಳೆದ ೨೦೨೧ ರ ಫೆಬ್ರುವರಿ ೧೪ ರಂದು ಆಕಸ್ಮಿಕವಾಗಿ ಮೋಬೈಲ್ ಮೂಲಕ ಪರಸ್ಪರ ಸಂಪರ್ಕ ಹೊಂದಿದ್ದಾರೆ. ಬಳಿಕ ಮೊಬೈಲ್ನಲ್ಲಿಯೇ ಮಾತನಾಡುತ್ತಿದ್ದ ಪರಸ್ಪರ ಆಕರ್ಷಣೆಗೊಳಗಾಗಿ ಪ್ರೀತಿಸಲಾರಂಭಿಸಿದ್ದಾರೆ.
ಕೆಲ ದಿನಗಳ ಬಳಿಕ ನಿನ್ನನ್ನೇ ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿದ ಸಂಜು,ಆಕೆಯೊಂದಿಗೆ ಸುತ್ತಾಡಿದ್ದಾನೆ. ಯುವತಿಯ ಮನೆಯವರನ್ನು ಪರಿಚಯಿಸಿಕೊಂಡ ಸಂಜು, ಆಕೆಯ ಮನೆಗೆ ಆಗಾಗ್ಗೆ ಜ್ಯೋತಿಯನ್ನೇ ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾನೆ. ನಂತರ ಸೈನ್ಯದಲ್ಲಿರುವ ಆತನ ಭರವಸೆಯ ಮಾತಿಗೆ ಮರುಳಾದ ಜ್ಯೋತಿ ಸರ್ವಸ್ವವನ್ನೂ ಆತನಿಗೆ ಅರ್ಪಿಸಿದ್ದಾಳೆ.
ಇದಾದ ನಂತರ ಆಕೆ ಮದುವೆ ಮಾಡಿಕೊಳ್ಳುವಂತೆ ಬಲವಂತ ಮಾಡಿದಾಗ ಇಲ್ಲದ ನೆಪ ಹೇಳಿ ತನ್ನ ಕರ್ತವ್ಯಕ್ಕೆ ತೆರಳಿದ್ದಾನೆ. ಈಗ ಯುವತಿ ಆತನಿಗೆ ಪೋನ್ ಮಾಡಿದರೂ ಸಂಪರ್ಕಕ್ಕೆ ಸಿಗುತ್ತಿಲ್ಲ.ಅಲ್ಲದೇ ಜ್ಯೋತಿಯ ನಡತೆಯ ಬಗ್ಗೆ ಆರೋಪ ಮಾಡುತ್ತ, ಮದುವೆಗೆ ನಿರಾಕರಿಸುತ್ತಿದ್ದಾನೆ ಎಂದು ಯುವತಿ ಆರೋಪಿಸುತ್ತಿದ್ದಾಳೆ.
ತನ್ನನ್ನು ಮದುವೆ ಮಾಡಿಕೊಳ್ಳುವಂತೆ ಮನೆಯವರ ಮೂಲಕ ಒತ್ತಾಯಿಸಿದರೂ ಜಗ್ಗದ ಸಂಜುನ ವರ್ತನೆಯಿಂದ ಬೇಸತ್ತ ಯುವತಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮುಖಾಂತರ ಪೊಲೀಸರ ಮೊರೆ ಹೋಗಿದ್ದಳು. ಆಗ ಮಹಿಳಾ ಠಾಣೆಯ ಪೊಲೀಸರು ಆತನನ್ನು ಕರೆಸಿ ವಿಚಾರಿಸಿದಾಗ, ೧೫ ದಿನಗಳೊಳಗೆ ಮದುವೆಗೆ ಮಾಡಿಕೊಳ್ಳುವುದಾಗಿ ಹೇಳಿದ್ದ ಸಂಜು ಇದೀಗ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.
ಇತ್ತ ತನಗೆ ನ್ಯಾಯ ಕೊಡಿಸುವಂತೆ ಹಠ ಹಿಡಿದಿರುವ ಯುವತಿ ಜ್ಯೋತಿಗೆ, ಮಹಿಳಾ ಪೊಲೀಸ್ ಠಾಣೆಯ ಸಿಪಿಐ ವೈ.ಡಿ.ಅಗಸಿಮನಿ ಮತ್ತು ಸಿಬ್ಬಂದಿ ಸಹಾಯ ಮಾಡುವ ದಿಸೆಯಲ್ಲಿ ತಮ್ಮ ಪ್ರಾಮಾಣಿಕ ಪ್ರಯತ್ನ ಮುಂದುವರೆಸಿದ್ದಾರೆ.
ಜ್ಯೋತಿ ತನಗೆ ನ್ಯಾಯ ಕೊಡಿಸುವಂತೆ ದೂರು ದಾಖಲಿಸಿದ್ದು, ಕಾನೂನು ರೀತ್ಯ ಕ್ರಮ ಜರುಗಿಸುವುದಾಗಿ ಸಿಪಿಐ ವೈ.ಡಿ.ಅಗಸಿಮನಿ ಅವರು ’ಸಂಜೆ ದರ್ಪಣ’ಕ್ಕೆ ತಿಳಿಸಿದ್ದಾರೆ.