ಹುಬ್ಬಳ್ಳಿ: ಕೋವಿಡ್ ನಂತಹ ತುರ್ತುಕಾಲದಲ್ಲಿ ಸರ್ಕಾರದೊಂದಿಗೆ ಕೈ ಜೋಡಿಸಿ ಕೋವಿಡ್ ನಿರ್ವಹಣೆ ಹಾಗೂ ಜನರ ಸೇವೆ ಮಾಡುತ್ತಿರುವ ಸೇವಾ ಭಾರತಿ ಮತ್ತು ಕೆಎಲ್ಇ ಸಂಸ್ಥೆ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ ಹೇಳಿದರು.
ವಿದ್ಯಾನಗರದ ಕೆಎಲ್ಇ ಸಂಸ್ಥೆಯ ಆವರಣದಲ್ಲಿ ಸೇವಾ ಭಾರತಿ ಮತ್ತು ಕೆಎಲ್ಇ ಸಂಸ್ಥೆಯ ಕೋವಿಡ್ ಸೆಂಟರ್ಗಳಿಗೆ ಎಸ್.ಎಸ್. ಶೆಟ್ಟರ ಫೌಂಡೇಶನ್ ವತಿಯಿಂದ ನೀಡಲಾದ ಮೂರು ಆಕ್ಸಿಜನ್ ಕಾನ್ಸಂಟ್ರೇಟರ್ಗಳನ್ನು ಹಸ್ತಾಂತರಿಸಿ ಮಾತನಾಡಿದರು.
ಸರ್ಕಾರಕ್ಕೆ ಸಂಘ ಸಂಸ್ಥೆಗಳು ಸಹಕಾರ ನೀಡಿದರೆ ಎಂತಹ ಪರಿಸ್ಥಿತಿ ಬಂದರೂ ಎದುರಿಸಬಹುದು. ಸರ್ಕಾರ ತನ್ನ ಎಲ್ಲಾ ಶಕ್ತಿ ಮೀರಿ ಕೋವಿಡ್ ನಿರ್ವಹಣೆಯಲ್ಲಿ ತೊಡಗಿದೆ. ನಿಸ್ವಾರ್ಥದಿಂದ ಹಲವು ಸಂಘ ಸಂಸ್ಥೆಗಳು ರಾಜ್ಯಾದ್ಯಂತ ಸರ್ಕಾರದ ನೆರವಿಗೆನಿಂತಿವೆ ಎಂದರು.
ವೈದ್ಯ ಕಿರಣ ಗುಡ್ಡದಕೇರಿ ಮಾತನಾಡಿ, ಕೋವಿಡ್ ಕೇರ್ ಸೆಂಟರ್ನಲ್ಲಿ ಇದುವರೆಗೆ 300 ಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ ಎಂದರು.
ಕರ್ನಾಟಕ ಉತ್ತರ ಪ್ರಾಂತದ ಪ್ರಚಾರಕ ನರೇಂದ್ರಜಿ, ಹಿಂದೂ ಸೇವಾ ಪ್ರತಿಷ್ಠಾನದ ಪ್ರಚಾರಕ ಸುಧಾಕಾರಜಿ, ಸೇವಾ ಭಾರತಿ ಅಧ್ಯಕ್ಷ ರಘು ಅಕಮುಂಚಿ, ಎಸ್.ಎಸ್. ಶೆಟ್ಟರ ಫೌಂಡೇಶನ್ ನಿರ್ದೇಶಕ ಸಂಕಲ್ಪ ಶೆಟ್ಟರ, ವೀರೇಶ ಅಂಗಡಿ, ಎಂ.ಆರ್. ಪಾಟೀಲ, ಸಂದೀಪ ಬೂದಿಹಾಳ, ಮಧುಸೂದನ ಕುಲಕರ್ಣಿ, ಡಾ. ಸಂಜಯ ಪಿರಾಪೂರ, ಉಮೇಶ ದೂಶಿ ಮತ್ತು ದತ್ತಮೂರ್ತಿ ಕುಲಕರ್ಣಿ ಇದ್ದರು.