ಹಾನಗಲ್: ಹಾನಗಲ್ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಎಂಬುವರು ನಿವೃತ್ತ ಪೊಲೀಸ್ ಅಧೀಕ್ಷಕ ಸಂಗನಗೌಡ ವೀರನಗೌಡರ ಅವರ ಬಗ್ಗೆ ಅಗೌರವ ವಾಗಿ ಮಾತನಾಡಿ, ನಿರಪರಾಧಿಯೊಬ್ಬನ ಬಿಡುಗಡೆಗಾಗಿ ತಮ್ಮ ಮನೆಗೆ ಕಟ್ಟಿಗೆಯ ಪೀಠೋಪಕರಣ ನೀಡುವಂತೆ ಅಪರೋಕ್ಷವಾಗಿ ಲಂಚ ಕೇಳಿರುವ ದೂರವಾಣಿ ಸಂಭಾಷಣೆಯ ಆಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪಿಎಸ್ಐ ವಿರುದ್ಧ ಕ್ರಮ ಜರುಗಿಸಬೇಕು ಇಲ್ಲದಿದ್ದರೆ ಪೊಲೀಸ್ ಇಲಾಖೆ ಬಗ್ಗೆ ಇರುವ ಸದಭಿಪ್ರಾಯ ಕಳೆದು ಹೋಗುತ್ತದೆ ಎಂದು ಎಂದು ಹಾನಗಲ್ಲ ತಾಲೂಕಿನ ಜನ ಮಾತನಾಡಿ ಕೊಳ್ಳುತ್ತಿದ್ದಾರೆ.
ಪಿಎಸ್ಐ ಶ್ರೀಶೈಲ್ ಪಟ್ಟಣಶೆಟ್ಟಿ ಮಧ್ಯವರ್ತಿ ವ್ಯಕ್ತಿಯೊಬ್ಬನ ಜೊತೆ ಮಾತ ನಾಡಿದ ದೂರವಾಣಿ ಸಂಭಾಷಣೆಯ ಆಡಿಯೋ ತುಣುಕು ಇದೀಗ ಭಾರಿ ವೈರಲ್ ಆಗಿದೆ. ಇಷ್ಟಾದರೂ ತನ್ನನ್ನು ಯಾರೂ ಏನೂ ಮಾಡಿಕೊಳ್ಳು ವುದು ಆಗುವುದಿಲ್ಲ ಎಂಬಂತೆ ಪಿಎಸ್ಐ ದುರಂಹಕಾರದಿಂದ ವರ್ತಿಸು ತ್ತಿದ್ದಾರೆನ್ನಲಾಗಿದೆ.
ಇಲಾಖೆಯ ಹಿರಿಯ ಅಧಿಕಾರಿಗಳೂ ಕೂಡ ಇಷ್ಟೆಲ್ಲ ನಡೆದರೂ ಹಿರಿಯ ಅಧಿಕಾರಿಗಳು, ವೈರಲ್ ಆಗಿರುವ ಆಡಿಯೋ ಬಗ್ಗೆ, ಅದರ ಸತ್ಯಸತ್ಯತೆಯ ಬಗ್ಗೆ, ಹಾಗೂ ಪಿ ಎಸ್ ಐ ಬಗ್ಗೆ ತನಿಖೆ ನಡೆಸಿ ಕ್ರಮ ತೆಗೆದು ಕೊಳ್ಳದೆ ಜಾಣಮೌನಕ್ಕೆ ಜಾರಿರುವುದು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.
ಘಟನೆಯ ವಿವರ: ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪ ಗ್ರಾಮದ ನಿವೃತ್ತ ಪೊಲೀಸ್ ಅಧೀಕ್ಷಕ ಸಂಗನಗೌಡ ಅಯ್ಯನಗೌಡ ವೀರನಗೌಡರ ಎಂಬುವರ ಜಮೀನಿನಲ್ಲಿ ದಿ. ೧೪.೮.೨೦೨೧ ರಂದು ೩೦ ಸಾವಿರ ರೂ. ಮೌಲ್ಯದ ಬಿಳಿ ಬಣ್ಣದ ಟಗರೊಂದನ್ನು ಕಳುವು ಮಾಡಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸಂಗನಗೌಡ ವೀರನಗೌಡ ಅವರು ಹಾನಗಲ್ ಪೊಲೀಸರಿಗೆ ದೂರು ಸಹ ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ಕೊಪ್ಪರಸಿಕೊಪ್ಪ ಗ್ರಾಮದ ಫಕ್ಕೀರಪ್ಪ ಗೊಲ್ಲರ ಎಂಬ ನಿರಪರಾಧಿಯನ್ನು ಬಂಧಿಸಿದ್ದರು.
ನಂತರ ಫಕ್ಕೀರಪ್ಪ ಗೊಲ್ಲರ ಕಳ್ಳತನ ಮಾಡಿಲ್ಲ, ಬದಲಿಗೆ ಅದೇ ಕೊಪ್ಪರ ಸಿಕೊಪ್ಪದ ಕಿರಣ ಶೇಕಪ್ಪ ಮಾದರ ಎಂಬಾತ ಟಗರು ಕಳ್ಳತನ ಮಾಡಿದ್ದ ಎನ್ನುವುದು ತನಿಖೆಯಿಂದ ತಿಳಿದು ಬಂದಿತ್ತು.
ಈ ಮಧ್ಯೆ ನಿರಪರಾಧಿ ಫಕ್ಕೀರಪ್ಪ ಗೊಲ್ಲರನನ್ನು ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಪಿಎಸ್ಐ ಶ್ರೀಶೈಲ್ ಪಟ್ಟಣಶೆಟ್ಟಿ ಮಧ್ಯವರ್ತಿ ವ್ಯಕ್ತಿಯೊಬ್ಬನ ಜೊತೆ ದೂರವಾಣಿಯಲ್ಲಿ ಮಾತುಕತೆ ನಡೆಸಿದ್ದು, ನಿರಪರಾಧಿ ಫಕ್ಕೀರಪ್ಪನನ್ನು ಬಿಡುಗಡೆಗೊಳಿಸಲು ಫರ್ನಿಚರ್ಗೆ ಡಿಮ್ಯಾಂಡ್ ಮಾಡಿ ತಮಗೆ ಮತ್ತು ಮೇಲಾಧಿಕಾರಿಗಳಿಗಾಗಿ ಫರ್ನಿಚರ್ ಕೊಡುವ ವಿಚಾರ ಏನಾಯಿತು ಎಂದೆಲ್ಲಾ ಕೇಳಿದ್ದಾರೆ. ಅದಕ್ಕೆ ಮಧ್ಯವರ್ತಿ ಫರ್ನಿಚರ್ ಫೈನಲ್ ಟಚ್ಅಪ್ ನಲ್ಲಿದ್ದು, ಮಧ್ಯಾಹ್ನ ಸ್ವತಃ ಬಂದು ಕಾಣುವುದಾಗಿ ಹೇಳಿರುವ ದೂರವಾಣಿ ಮಾತುಕತೆಯ ಆಡಿಯೋ ಭಾರಿ ವೈರಲ್ ಆಗಿದ್ದು, ಚರ್ಚೆಗೆ ಗ್ರಾಸವಾಗಿದೆ.